ಮಸಾಜ್ ಪಾರ್ಲರ್ ನಕಲಿ ರೈಡ್, ಪೇದೆ ಸಸ್ಪೆಂಡ್
ನಗರದ ಕಂಕನಾಡಿ, ಫಳೀರ್ನಲ್ಲಿ ಚೈತನ್ಯ ಆಯುರ್ವೇದಿಕ್, ನಂತೂರಿನ ಅಮೃತ ನಿಸರ್ಗ ಆಯುರ್ವೇದಿಕ್ ಮತ್ತು ಬಲ್ಮಠದ ಸೋಲಸ್ ಫ್ಯಾಮಿಲಿ ಸ್ಪಾ ಸೆಂಟರ್ ಮೇಲೆ ಕಳೆದ ಅಕ್ಟೋಬರ್ ತಿಂಗಳಿನಲ್ಲಿ ದಾಳಿ ನಡೆಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನರನ್ನು ಬಂಧಿಸಲಾಗಿತ್ತು. ಆದರೆ ಇದೆಲ್ಲವೂ ಪೊಲೀಸರ ನಾಟಕ, ಜನತೆ ಕಣ್ಣೊರೆಸುವ ತಂತ್ರ ಎಂಬ ವಿಷಯ ಬಹಿರಂಗವಾಗಿದೆ.
ಹಫ್ತಾ ವಸೂಲಿಗೆ ತಂತ್ರ: ಪೊಲೀಸರಿಗೆ ಕಾಲಕಾಲಕ್ಕೆ ತಲುಪಬೇಕಿದ್ದ ಮಾಮೂಲಿ ತಲುಪದಿದ್ದಾಗ ಇನ್ಸ್ ಪೆಕ್ಟರ್ ಕಿರಣ್ ತನ್ನ ತಂಡದೊಡನೆ ಪಾರ್ಲರ್ ಗಳಿಗೆ ಹೋಗಿದ್ದಾರೆ. ಮಸಾಜ್ ಪಾರ್ಲರ್ ಸಿಬ್ಬಂದಿಗಳು ಕಿರಣ್ ಅವರ ಬೆದರಿಕೆಗೆ ಬಗ್ಗದಿದ್ದಾಗ ಪೇದೆಯೊಬ್ಬ ತನ್ನ ಕಿಸೆಯಲ್ಲಿದ್ದ ಕಾಂಡೋಮ್ ತೆಗೆದು ಅಲ್ಲಲ್ಲಿ ಎಸೆದಿದ್ದಾನೆ. ನಂತರ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂದು ಆರೋಪಿಸಿ ದಾಳಿ ನಡೆಸಿದ ನಾಟಕ ಆರಂಭಿಸಿದ್ದಾರೆ.
ಇಡೀ ಪ್ರಕರಣಕ್ಕೆ ತಿರುವು ಕೊಟ್ಟಿದ್ದು ಕಾಂಡೋಮ್. ಪೇದ ಎಸೆದ ಕಾಂಡೋಮ್ ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಮಾಮೂಲಿ ಪಡೆಯುತ್ತಿದ್ದ ಪೊಲೀಸರನ್ನು ಹಿಡಿಯಲು ಸಹಕಾರಿಯಾಗಿದೆ.
ಈ ಘಟನೆಗೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿ ಸೀಮಂತ್ ಕುಮಾರ್, ಮಸಾಜ್ ಪಾರ್ಲರ್ ದಾಳಿ ಸಂಬಂಧಿಸಿದಂತೆ ಕದ್ರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಕಿರಣ್, ಶಿವಪ್ಪ ಹಾಗೂ ಪ್ರಮೋದ್ ಎಂಬ ಪೇದೆಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಉಳಿದ ನಾಲ್ವರು ಸಿಬ್ಬಂದಿಗಳ ವಿರುದ್ಧ ಇಲಾಖೆ ತನಿಖೆ ಮುಂದುವರೆದಿದೆ ಎಂದಿದ್ದಾರೆ.
ಎಸಿಪಿ ರವೀಂದ್ರ ಗಡದಿ ನೇತೃತ್ವದಲ್ಲಿ ಉರ್ವಠಾಣಾ ವ್ಯಾಪ್ತಿಯ ವಸತಿ ಗೃಹವೊಂದರ ಮೇಲೆ ಕೂಡಾ ದಾಳಿ ನಡೆದಿತ್ತು. ಇದರ ಬಗ್ಗೆ ಕೂಡಾ ಹಿಂದೂ ಸಂಘಟನೆ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದರು. ಪ್ರಕರಣದಲ್ಲಿ ಸಿಕ್ಕಿಬಿದ್ದ ಯುವತಿಯರಿಗೆ ಕೌನ್ಸೆಲಿಂಗ್ ನಡೆಸಿ ಪ್ರಕರಣದಿಂದ ಮುಕ್ತಗೊಳಿಸಲಾಗಿತ್ತು.