ಆರೋಪ ಮುಕ್ತಗೊಂಡ ತಕ್ಷಣ ಯಡಿಯೂರಪ್ಪಗೆ ಪಟ್ಟ:ಗಡ್ಕರಿ
ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ರೆಸಾರ್ಟಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಗಡ್ಕರಿ, 'ಯಡಿಯೂರಪ್ಪ ಅವರು ತಮ್ಮ ಪಕ್ಷದ ಜನಪ್ರಿಯ ನಾಯಕ. ಅವರಿಗೆ ಪಕ್ಷದಲ್ಲಿ ಮನ್ನಣೆ, ಮಣೆ ಸದಾ ಇರುತ್ತದೆ' ಎಂದು ಯಡಿಯೂರಪ್ಪ ಬಣವನ್ನು ಸಮಾಧಾನಪಡಿಸುವ ಮಾತುಗಳನ್ನಾಡಿದ್ದಾರೆ. ಸಭೆ ಬರಕಾಸ್ತುಗೊಳ್ಳುತ್ತಿದ್ದಂತೆ ಯಡಿಯೂರಪ್ಪ ಅವರು ರೇಸ್ ಕೋರ್ಸ್ ರಸ್ತೆಯ ತಮ್ಮ ನಿವಾಸದತ್ತ ಪ್ರಯಾಣ ಬೆಳೆಸಿದರು. ಅವರ ಬೆಂಬಲಿಗರೂ ಸಹ ಯಡಿಯೂರಪ್ಪ ಹಾದಿಯಲ್ಲಿ ಸಾಗಿದರು.
'ಯಡಿಯೂರಪ್ಪ ಅವರನ್ನು ಮತ್ತೆ ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪಿಸುವ ವಿಚಾರದಲ್ಲಿ ಪಕ್ಷದ ಹೈಕಮಾಂಡ್ ತನ್ನ ಈ ಹಿಂದಿನ ನಿರ್ಧಾರಕ್ಕೆ ಅಂಟಿಕೊಂಡಿದೆ. ಅವರು ಮೊದಲು ಕೋರ್ಟ್ ಕೇಸುಗಳಿಂದ ಆರೋಪ ಮುಕ್ತರಾಗಿ ಬರಲಿ. ಮರುಗಳಿಗೆಯೇ ಅವರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲಾಗುವುದು' ಎಂದು ಗಡ್ಕರಿ ಇದೇ ವೇಳೆ ಸ್ಪಷ್ಟಪಡಿಸಿದರು.
ಈ ಮಧ್ಯೆ, ಮಾಧ್ಯಮದೊಂದಿಗೆ ಮಾತನಾಡಿದ ಕೆಎಸ್ ಈಶ್ವರಪ್ಪ 'ಯಡಿಯೂರಪ್ಪ ಸಲಹೆಯಂತೆ ಸರಕಾರ ನಡೆಸಿಕೊಂಡು ಹೋಗಲು ಗಡ್ಕರಿ ಅವರು ಸೂಚಿಸಿದ್ದಾರೆ. ಉಡುಪಿ ಉಪಚುನಾವಣೆಗೆ ಒತ್ತು ಕೊಟ್ಟಿರುವ ಗಡ್ಕರಿ ಅವರು ಒಗ್ಗಟ್ಟಿನಿಂದ ಚುನಾವಣೆ ಎದುರಿಸುವಂತೆ ಹೇಳಿದ್ದಾರೆ' ಎಂದು ಹೇಳಿದ್ದಾರೆ. ಆದರೆ ಚುನಾವಣೆ ನಾಯಕತ್ವ ಯಾರ ಹೆಗಲಿಗೆ? ಸಾಮೂಹಿಕ ನಾಯಕತ್ವದಲ್ಲಿ ಹೋರಾಡುತ್ತಾರಾ? ಇದಕ್ಕೆ ಯಡಿಯೂರಪ್ಪ ಸಾಥ್ ನೀಡುತ್ತಾರಾ? ಎಂಬುದರ ಬಗ್ಗೆ ಈಶ್ವರಪ್ಪ ಯಾವುದೇ ಮಾಹಿತಿ ನೀಡಲಿಲ್ಲ.