ಸಿಎಂ ಬದಲಿಸದಂತೆ ಕಮಾಂಡ್ ಮಾಡಿದ್ದು RSS
'ಕರ್ನಾಟಕ ಬಿಜೆಪಿ ಶಾಸಕಾಂಗ ಪಕ್ಷದ ನಾಯಕತ್ವವನ್ನು ಯಾವುದೇ ಕಾರಣಕ್ಕೂ ಬದಲಿಸಬಾರದು' ಎಂಬ ಖಡಕ್ ನಿರ್ಧಾರಕ್ಕೆ ಅಂಟಿಕೊಂಡ RSS, ಬಿಜೆಪಿ ರಾಷ್ಟ್ರೀಯ ವರಿಷ್ಠರಿಗೂ ಅದೇ ಸಂದೇಶವನ್ನು ರವಾನಿಸಿತ್ತು.
'ಕಳೆದ ತಿಂಗಳು ಯಡಿಯೂರಪ್ಪ ಅವರ ಪರಮಾಪ್ತರ ನಿವಾಸದಲ್ಲೇ ಸಭೆ ಸೇರಿ ತಮ್ಮ ನಿರ್ಧಾರವನ್ನು ತಿಳಿಸಲಾಗಿತ್ತು. ಹುಬ್ಬಳ್ಳಿಯಲ್ಲೂ ಅವರಿಗೆ ಮಂಗಳಾರತಿಯಾಗಿತ್ತು. ಆದರೂ ಮತ್ತೆ ಯಡಿಯೂರಪ್ಪ ಖ್ಯಾತೆ ತೆಗೆಯುತ್ತಿದ್ದಾರೆ. ಅವರ ಒತ್ತಡದ ತಂತ್ರಕ್ಕೆ ಮಣಿಯುವುದು ಬೇಡ' ಎಂದು RSS ತಾಕೀತು ಮಾಡಿತ್ತು ಎಂದು ಮೂಲಗಳು ತಿಳಿಸಿವೆ.
ಅದಕ್ಕಿಂತ ಮುಖ್ಯವಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಡಿವಿ ಸದಾನಂದ ಗೌಡರ ಆಡಳಿತದ ಬಗ್ಗೆ ತುಂಬಾ ಸಂತುಷ್ಟಗೊಂಡಿದೆ. ಅವರ ಸಮರ್ಥ ಆಡಳಿತದ ಬಗ್ಗೆ ಯಾವುದೇ ಕೊಂಕಿಲ್ಲ ಎಂಬುದು ಸದಾನಂದ ಗೌಡರ ಮುಂದುವರಿಕೆಗೆ ಆಸರೆಯಾಗಿದೆ ಎಂಬುದು ಸಂಘದ ನುಡಿ.
'ಯಡಿಯೂರಪ್ಪ ಜತೆಗೆ 20-30 ಶಾಸಕರು ಇರಬಹುದು ಅಷ್ಟೆ. ಅಷ್ಟಕ್ಕೂ ಅವರೇನಾದರೂ ಬಂಡಾಯದ ಬಾವುಟ ಹಾರಿಸಿದರೆ ಅವರ ಆವುಟಕ್ಕೆ ಹೆದರುವುದು ಬೇಡ. ಸರಕಾರದ ಮೇಲೆ ಅದು ಯಾವುದೇ ಪರಿಣಾಮ ಬೀರದು' ಎಂಬ ಲೆಕ್ಕಾಚಾರವೂ ಇತ್ತು ಎಂದು RSS ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.