ನಾಳೆ ಭಾನುವಾರ ಬಿಬಿಸಿಯಲ್ಲಿ ನಾಗ್ತಿಹಳ್ಳಿ ಈವೆನಿಂಗ್!

ಹಾಗಂತ ಬಿ.ಬಿ.ಸಿ ನಿರ್ಧರಿಸಿದೆ. ಈ ಸಂಪ್ರದಾಯ ಹೊಸದಾ? ಹಳೆಯದಾ? ಗೊತ್ತಿಲ್ಲ. ನನ್ನ ಮಟ್ಟಿಗಂತೂ ಒಂದು ಪ್ರಯೋಗ. ಒಂದು ಸಂಭ್ರಮ. ಇದು ಗೆಳೆಯನಿಂದಲೇ ಆರಂಭವಾಗಲಿ ಅನ್ನಿಸಿತ್ತು. ಗಾಂಧಿ ಬಜಾರ್ನಲ್ಲಿರುವ ಬೆಳಗೆರೆ ಬುಕ್ಸ್ ಅಂಡ್ ಕಾಫಿೞ ಮಳಿಗೆಯ ಒಂದಿಡೀ ಭಾಗದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಬರೆದ ಅಷ್ಟೂ ಪುಸ್ತಕಗಳ ಮತ್ತು ಡಿವಿಡಿಗಳ display ಚೆಂದಗೆ ಮಾಡಿಡಲಾಗುತ್ತದೆ. ಭಾನುವಾರ, ಅಂದರೆ 26 ಫೆಬ್ರುವರಿ 2012ರ ಸಂಜೆ ಸರಿಯಾಗಿ 6 ಗಂಟೆಗೆ ನಾಗತಿಹಳ್ಳಿಯನ್ನು ನಾನು ಬಿಬಿಸಿಗೆ ಕರೆ ತರುತ್ತೇನೆ. ಅಲ್ಲಿ ಕೂರಲಿಕ್ಕೊಂದು ಸ್ಥಳ. ಪುಟ್ಟ ಮೈಕು. ನಾಲ್ಕು ಮಾತು. ನಾಗತಿಹಳ್ಳಿ ಒಂದು ಪದ್ಯ ಓದುತ್ತಾನೆ: ತನ್ನದು ಅಥವಾ ತನಗಿಷ್ಟವಾದ ಕವಿಯದು.
ಅವತ್ತು ಸಂಜೆಯಿಡೀ ನಾಗತಿಹಳ್ಳಿ ನಮ್ಮೊಂದಿಗೇ ಇರುತ್ತಾನೆ. ಮಳಿಗೆಗೆ ಬಂದವರೊಂದಿಗೆ ಮಾತು, ಅವರ ಪ್ರಶ್ನೆಗೆ ಉತ್ತರ, ಹಸ್ತಾಕ್ಷರ, ಈಷ್ಟಗಲ ನಗೆಯೊಂದಿಗೆ ಫೊಟೋ! ಜೊತೆಯಲ್ಲಿ ಫೊಟೋ ತೆಗೆಸಿಕೊಂಡವರು ಎರಡು ದಿನಗಳಲ್ಲಿ www.ravibelagere.com ನಿಂದ ತಮ್ಮ ಫೋಟೋಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ವಿಶೇಷವೆಂದರೆ, ಅವತ್ತು ನಾಗತಿಹಳ್ಳಿ ಬರೆದ ಯಾವುದೇ ಪುಸ್ತಕ ಖರೀದಿಸಿದರೂ ಅದಕ್ಕೆ 15% ರಿಯಾಯತಿ ಇರುತ್ತದೆ. ಉಳಿದಂತೆ ಎಲ್ಲರ ಪುಸ್ತಕಗಳಿಗೂ ನಮ್ಮಲ್ಲಿ 5% ರಿಯಾಯಿತಿ, ನಾನು ಬರೆದ ಪುಸ್ತಕಗಳಿಗೆ 10% ರಿಯಾಯಿತಿ ಎಲ್ಲ ದಿನಗಳಲ್ಲೂ ಲಭ್ಯ. ಈ ವ್ಯವಸ್ಥೆ ಮತ್ಯಾವ ಪುಸ್ತಕದ ಅಂಗಡಿಯಲ್ಲೂ ಇಲ್ಲ. ಸಾಮಾನ್ಯವಾಗಿ ಇರುವುದಿಲ್ಲ.
ಹೀಗೆ ನಾಗತಿಹಳ್ಳಿ ಚಂದ್ರಶೇಖರ್ ಜೊತೆಗೆ ಸಂಜೆ ಕಳೆಯುವುದರೊಂದಿಗೆ ಆರಂಭವಾಗುವ ಸಂಪ್ರದಾಯ ನಿರಂತರವಾಗಿ ಮುಂದುವರೆಯಲಿದೆ. ಬೇರೆ ಬೇರೆ ಕವಿಗಳು, ಸಾಹಿತಿಗಳು ಹಿರಿ-ಕಿರಿಯ ಲೇಖಕರು, ವಿಮರ್ಶಕರು, ಸಂಗೀತಗಾರರು, ಕಲಾವಿದರು, ಚಿತ್ರನಟರು- ಹೀಗೆ ವಿವಿಧ ರಂಗಗಳ ಗಣ್ಯರು ಬಂದು ಪುಸ್ತಕದಂಗಡಿಯಲ್ಲಿ ಕುಳಿತು, ಓದುಗರೊಂದಿಗೆ ಸಂಜೆ ಕಳೆಯುವ, ಪದ್ಯ ಓದುವ, ಹಾಡುವ, ಹಸ್ತಾಕ್ಷರ ನೀಡುವ, ಫೊಟೋ ತೆಗೆಸಿಕೊಳ್ಳುವ ಶುಭ್ರ ಮನಸ್ಸಿನ ಸಂಪ್ರದಾಯ.
ಪುಸ್ತಕ ಸರಿ, ಸಿ.ಡಿ. ಡಿವಿಡಿ ಸರಿ: ಕಾಫಿಯ ರಗಳೆ ಯಾಕೆ ಹಚ್ಚಿಕೊಂಡೆ? ಕೆಲವರು ಸುಮ್ಮನೆ ಪುಗಸಟ್ಟೆ ಸಿಗುತ್ತೆ ಅಂತ ಕುಡಿದು ಹೋಗಲು ಬರುತ್ತಾರೆ ಅಂದಿದ್ದರು ಗೆಳೆಯರು. ಆದರೆ ನನಗೆ ಗೊತ್ತು, ಪುಸ್ತಕ ಕೊಳ್ಳಲು ಬರುವವರು ದುರಾಸೆಯವರಲ್ಲ. ಕೆಲವರಿಗೆ ಬಲವಂತ ಮಾಡಿದರೂ ಕುಡಿಯಲೊಲ್ಲದ ಸಂಕೋಚ. ಮತ್ತೆ ಕೆಲವರಿಗೆ, ಕಾಫಿ ಕುಡಿದರೆ ಅದಕ್ಕೂ charge ಮಾಡುತ್ತೇವೇನೋ ಎಂಬ ಹಿಂಜರಿಕೆ. ಸಾಮಾನ್ಯವಾಗಿ ಸಂಜೆಗಳಲ್ಲಿ ಒಂದೆರಡು ತಾಸು ಅಂಗಡಿಯಲ್ಲಿ ಕಳೆದು ಬರುವ ನಾನು ಖುದ್ದಾಗಿ ನಿಂತು ಕಾಫಿ ಕುಡಿಯಿರಿ ಅಂತ ಉಪಚಾರ ಮಾಡುತ್ತೇನೆ. ಕೆಲವರು ಹಸ್ತಾಕ್ಷರ ತೆಗೆದುಕೊಳ್ಳುತ್ತಾರೆ. ನೂತನ ದಂಪತಿಗಳಿಗೆ ನನ್ನ ಒಲವೇ ಸಿಡಿ ಬೇಕು. ಜೊತೆಗೆ ತಮ್ಮ ಮೊಬೈಲ್ನಲ್ಲೊಂದು ಫೊಟೋ. ಅವರಿಗೆ ಏನೋ ಎಕ್ಸೈಟ್ಮೆಂಟು. ನನಗೂ ಒಂದು ರಿಲೀಫು.
ಇಷ್ಟೆಲ್ಲ ಟೈಮು ಹ್ಯಾಗೆ manage ಮಾಡ್ತೀಯ ಅಂತ ಗೆಳೆಯರು ಕೇಳುತ್ತಾರೆ. ಗೊತ್ತಿಲ್ಲ: ಇತ್ತೀಚೆಗೆ ಟೈಮ್ ಮ್ಯಾನೇಜ್ ಮಾಡೋದನ್ನೇ ಬಿಟ್ಟು ಬಿಟ್ಟಿದ್ದೇನೆ. ಟೈಮೇ ನನ್ನನ್ನು ಮ್ಯಾನೇಜ್ ಮಾಡುತ್ತದೆ. ಪತ್ರಿಕೆ, ಶಾಲೆ, ಪುಸ್ತಕ ಬರೆಯೋದು, ಜೊತೆಗೆ ಪುಸ್ತಕದ ಅಂಗಡಿ, ಮಧ್ಯ ಮಧ್ಯೆ ನನ್ನ ಕಾಡಿನ ಯಾತ್ರೆಗಳು! ಎಲ್ಲವೂ ಗಡಿಯಾರದಂತೆ ನಡೆಯುವುದಿಲ್ಲ. ನಿಜ, ಗಡಿಯಾರ ಕೂಡ ಎಲ್ಲ ಸಲ ತೀರ ಕರಾರುವಾಕ್ಕಾಗಿ ನಡೆಯುವುದಿಲ್ಲವಲ್ಲ?
ಬದುಕೆಂದರೆ ಹೀಗೇನೇನೋ?
- ರವೀ












Click it and Unblock the Notifications