ನಾನಾಗಿಲ್ಲಾಂದ್ರೆ ಶೆಟ್ಟರ್ ಸಿಎಂ ಆಗಲಿ: ಯಡಿಯೂರಪ್ಪ
ಈ ಹಿನ್ನೆಲೆಯಲ್ಲಿ, ನಾಳೆ ನಿತಿನ್ ಗಡ್ಕರಿ ಮುಂದೆ ಶಕ್ತಿ ಪ್ರದರ್ಶನಕ್ಕೆ ಯಡಿಯೂರಪ್ಪ ಸಜ್ಜಾಗಿದ್ದಾರೆ. ಒಂದು ವೇಳೆ, ಕಾನೂನು ಕಂಟಕವನ್ನು ಮುಂದೊಡ್ಡಿ ಹೈಕಮಾಂಡ್ ಹಳೆಯ ರಾಗ ಹಾಡತೊಡಗಿದರೆ ತಾವು ಹೊಸ ರಾಗ ಹಾಡಲು ಯಡಿಯೂರಪ್ಪ ಶೃತಿ ಸರಿಪಡಿಸಿಕೊಂಡಿದ್ದಾರೆ.
ನೀ ನನಗಾದರೆ ನಾ ನಿನಗೆ: ಜಗದೀಶ್ ಶೆಟ್ಟರ್ ಈಗ ಪ್ರಧಾನ ಭೂಮಿಕೆಗೆ ಬಂದಿದ್ದಾರೆ. ಭಾನುವಾರ ಖುದ್ದಾಗಿ ಹುಬ್ಬಳ್ಳಿಯಲ್ಲಿ ಶೆಟ್ಟರ್ ಅನ್ನು ಭೇಟಿ ಮಾಡಿದ ಬಳಿಕ ಲೊಕೇಶನ್ ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯಲ್ಲಿರುವ ಯಡಿಯೂರಪ್ಪ ಅವರ ಅಧಿಕೃತ ನಿವಾಸಕ್ಕೆ ಶಿಫ್ಟ್ ಆಗಿದೆ. ಯಡಿಯೂರಪ್ಪ ಒಂದೇ ಸಮನೆ ಶೆಟ್ಟರ್ ಜತೆಗೆ ಸರಣಿ ಭೇಟಿ-ಮಾತುಕತೆಗಳನ್ನು ನಡೆಸುತ್ತಿದ್ದಾರೆ.
ಈ ಹಂತದಲ್ಲಿ ತಮ್ಮೊಂದಿಗೆ ಕೇವಲ 20 ಶಾಸಕರಿರುವುದನ್ನು ಯಡಿಯೂರಪ್ಪ ಮನಗಂಡಿದ್ದಾರೆ. ಅದಕ್ಕೆಂದೇ ಮತ್ತೊಬ್ಬ ಲಿಂಗಾಯತ ನಾಯಕನತ್ತ ಕಣ್ಣುಬಿಟ್ಟಿದ್ದಾರೆ. 'ನೀ ನನಗಾದರೆ ನಾ ನಿನಗೆ' ಎಂಬ ಗೂಡಾರ್ಥದಲ್ಲಿ ಶೆಟ್ಟರ್ ಜತೆ ಕೈಜೋಡಿಸಿರುವ ಯಡ್ಡಿ, ಕನಿಷ್ಠ 50 ಶಾಸಕರನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡು ನಾಳೆ ಗಡ್ಕರಿ ಮುಂದೆ ಬಂಡಾಯದ ಬಾವುಟ ಹಾರಿಸಲು ಸಜ್ಜಾಗುತ್ತಿದ್ದಾರೆ.
ನಾನಾಗ್ಲಿಲ್ಲಾಂದ್ರೆ ಶೆಟ್ಟರ್ ಸಿಎಂ ಆಗಲಿ ಎಂಬುದು ಯಡಿಯೂರಪ್ಪ ಅವರ ನವನವೀನ ಗೀತೆ. ಪ್ರಬಲ ಕೋಮಿನ ಲಿಂಗಾಯತರ ಕಡೆಯಿಂದ ಇಂತಹ ಬೇಡಿಕೆ ಬಂದಾಗ ಹೈಕಮಾಂಡ್ ತೆಪ್ಪಗೆ ತಮ್ಮ ಬಣಕ್ಕೆ ಮಣೆಹಾಕುವುದು ಖಂಡಿತ ಎಂಬುದು ಯಡ್ಡಿ ಲೆಕ್ಕಾಚಾರ.