ಚಿಕ್ಕಮಗಳೂರಿನಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

ಮುಂಬರುವ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲು ಕರ್ನಾಟಕ ಕಾಂಗ್ರೆಸ್ ನಿರ್ಧರಿಸಿದೆ. ಜೆಡಿಎಸ್ ಪಕ್ಷ ನಟಿ ಪೂಜಾ ಗಾಂಧಿ ಅವರನ್ನು ಕಣಕ್ಕೆ ಬಿಟ್ಟರೆ ಗಾಂಧಿ vs ಗಾಂಧಿ ಕದನ ಕುತೂಹಲದ ಎಲ್ಲೆ ಮೀರಿಸಲಿದೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಮರುಹುಟ್ಟು ನೀಡಿದ್ದ ಚಿಕ್ಕಮಗಳೂರು ಕ್ಷೇತ್ರದಿಂದಲೇ ಮೊಮ್ಮಗಳು ಪ್ರಿಯಾಂಕಾ ಅವರು ಕಣಕ್ಕಿಳಿದರೆ ಉತ್ತಮ ಅಡಿಪಾಯ ಸಿಗುತ್ತದೆ ಎಂದು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ.
ಈ ಬಗ್ಗೆ ಖಾಸಗಿ ವಾಹಿನಿಗಳಿಗೆ ಸ್ಪಷ್ಟನೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, 'ಹೈಕಮಾಂಡ್ ಗೆ ನಮ್ಮ ಆಯ್ಕೆಯ ಅಭ್ಯರ್ಥಿಗಳ ಪಟ್ಟಿಯನ್ನು ನೀಡಿದ್ದೇವೆ. ಜಯಪ್ರಕಾಶ್ ಹೆಗ್ಡೆ ಅವರು ಒಮ್ಮತ ಅಭ್ಯರ್ಥಿಯಾಗಿದ್ದಾರೆ ನಿಜ. ಆದರೆ ಸೋನಿಯಾಜಿ ಅವರ ಪುತ್ರಿ ಪ್ರಿಯಾಂಕಾ ಅವರು ಕಣಕ್ಕಿಳಿಯಲು ಬಯಸಿದರೆ ಅದಕ್ಕಿಂತ ಸೌಭಾಗ್ಯ ಬೇರೆ ಇಲ್ಲ' ಎಂದಿದ್ದಾರೆ.
ಗಾಂಧಿ vs ಗಾಂಧಿ?: ಈ ಮಧ್ಯೆ ಬಿಜೆಪಿ ತನ್ನ ಅಭ್ಯರ್ಥಿಯಾಗಿ ಸುನಿಲ್ ಕುಮಾರ್ ಕಾರ್ಕಳ ಅವರನ್ನು ಕಣಕ್ಕಿಳಿಸಿ ಮಂಗಳವಾರ ಅಧಿಕೃತವಾಗಿ ಘೋಷಿಸಿದೆ. ಜೆಡಿಎಸ್ ಪಕ್ಷದಿಂದ ಪೂಜಾಗಾಂಧಿ ಅವರನ್ನು ಕಣಕ್ಕಿಳಿಸಿ ಎಡಪಕ್ಷಗಳ ಬೆಂಬಲ ಪಡೆಯುವ ನಿರೀಕ್ಷೆಯಿದೆ. ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಹೆಸರನ್ನು 2 ದಿನಗಳಲ್ಲಿ ಅಧಿಕೃತವಾಗಿ ಪ್ರಕಟಿಸಲಿದೆ.












Click it and Unblock the Notifications