ಮೂವತ್ತು ನಿಮಿಷದಲ್ಲಿ ಬೆಂಗಳೂರಿಂದ ಮೈಸೂರಿಗೆ ಝೂಮ್
ಕನಸು ಕಾಣುವುದಕ್ಕೂ ಒಂದು ಮಿತಿಯಿರಬೇಕು ಅಂತ ಅಂದುಕೊಳ್ಳಬೇಡಿ. ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ (DMRC) ಪ್ರಧಾನ ಸಲಹೆಗಾರ ಈ ಶ್ರೀಧರನ್ ಅವರು ರಾಜ್ಯ ಸರಕಾರದ ಮನದಲ್ಲಿ ಬಿತ್ತಿರುವ ಕನಸಿನ ಬೀಜ ಮೊಳಕೆಯೊಡೆದರೆ, ಮೂವತ್ತು ನಿಮಿಷದಲ್ಲಿ ತಲುಪುವ ಕನಸು ನನಸಾಗುವುದು ಖಂಡಿತ.
ಈ ಕುರಿತು ಡಿಎಮ್ಆರ್ಸಿ ಕರ್ನಾಟಕದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಒಂದು ಪತ್ರ ಬರೆದಿದ್ದು, ಹೈ ಸ್ಪೀಡ್ ರೈಲು ಮಾರ್ಗವನ್ನು ರಚಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಇದಕ್ಕಾಗಿ ನೀಲನಕ್ಷೆ ಕೂಡ ಸಿದ್ಧವಾಗಿದ್ದು, ಕೇಂದ್ರ ಸರಕಾರ ಮತ್ತು ಕೇಂದ್ರ ರೈಲ್ವೆ ಇಲಾಖೆ ಇದನ್ನು ಕಾರ್ಯರೂಪಕ್ಕೆ ತರಲು ಉತ್ಸುಕತೆ ತೋರಿವೆ.
ಬೆಂಗಳೂರು ಮತ್ತು ಮೈಸೂರು ನಡುವೆ ಓಡಾಡುವವರ ಸಂಖ್ಯೆಯನ್ನು ಗಮನಿಸಿದರೆ ಮತ್ತು ಗಮ್ಯ ತಲುಪಬೇಕಾದ ಸಮಯ ಗಣನೆಗೆ ತೆಗೆದುಕೊಂಡರೆ ಇಂಥ ಹೈ ಸ್ಪೀಡ್ ರೈಲ್ ಲಿಂಕ್ ಅಗತ್ಯ ಖಂಡಿತವಿದೆ. ಇದಕ್ಕೆ ಅನುಮೋದನೆ ದೊರೆತು, ಯೋಜನೆ ಅನುಷ್ಠಾನಗೊಂಡರೆ ಎರಡೂ ನಗರಗಳ ನಡುವಿನ ಅಂತರವನ್ನು, ಗಂಟೆಗೆ 350 ಕಿ.ಮೀ. ವೇಗದಲ್ಲಿ ಚಲಿಸುವ ರೈಲಿನಲ್ಲಿ ಕೇವಲ 30 ನಿಮಿಷದಲ್ಲಿ ಕ್ರಮಿಸಬಹುದಾಗಿದೆ ಎಂದು ಶ್ರೀಧರನ್ ಹೇಳಿದ್ದಾರೆ.