ವಿಧಾನಸೌಧ ಶುಚಿಗೊಳಿಸಿ ಪಾವನವಾದ ಕಾಂಗ್ರೆಸ್!
ಮಾರುತಿ ವ್ಯಾನ್ ಮೇಲೆ ಹರಡಲಾಗಿದ್ದ ವಿಧಾನಸೌಧದ ಚಿತ್ರವನ್ನು ನೀರಿನಿಂದ ಶುಚಿಗೊಳಿಸುತ್ತಾ ರಾಜ್ಯ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಕರಣದ ರೂವಾರಿಗಳು, ಮಾಜಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್, ಲಕ್ಷ್ಮಣ ಸವದಿ ಹಾಗೂ ಸಿಸಿ ಪಾಟೀಲ್ರ ಪ್ರತಿಕೃತಿಗಳನ್ನು ದಹಿಸಿ, ರಾಜ್ಯ ಸರಕಾರದ ವಜಾಕ್ಕೆ ಆಗ್ರಹಿಸಿದರು.
ಬಿಜೆಪಿಯಿಂದ ಬ್ಲೂ ಫಿಲಂ ತಯಾರಿಕೆಯೂ: ಇತ್ತೀಚೆಗೆ ಮಲ್ಪೆ ರೇವ್ ಪಾರ್ಟಿಯನ್ನು ಸಮರ್ಥಿಕೊಂಡ ಕಾರಣದಿಂದಲೇ ಸದನದಲ್ಲಿ ಬ್ಲೂ ಫಿಲಂ ವೀಕ್ಷಣೆಯಂತಹ ಅವಮಾನಕಾರಿ ಕೃತ್ಯ ನಡೆದಿದೆ. ಇನ್ನೂ ಸಮರ್ಥಿಸಿಕೊಂಡಲ್ಲಿ ಬಿಜೆಪಿಯಿಂದ ಬ್ಲೂ ಫಿಲಂ ತಯಾರಿಕಾ ಕೃತ್ಯ ಕೂಡಾ ಆರಂಭವಾಗಬಹುದು ಎಂದು ಕೆಪಿಸಿಸಿ ಕಾರ್ಯದರ್ಶಿ ಐವನ್ ಡಿಸೋಜಾ ಆರೋಪಿಸಿದರು. ಸದಾನಂದ ಗೌಡರು ಮುಖ್ಯಮಂತ್ರಿಯಾಗಿ ಮುಂದುವರಿಯಲು ನೈತಿಕತೆಯನ್ನು ಹೊಂದಿಲ್ಲ. ಪ್ರಕರಣದಲ್ಲಿ ಭಾಗಿಯಾಗಿರುವವರನ್ನು ವಿಧಾನಸಭೆಯಿಂದ ಹೊರದಬ್ಬಬೇಕು ಎಂದು ಅವರು ಗುಡುಗಿದರು.
ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರ ವಹಿಸಿಕೊಂಡ ಆರಂಭದಲ್ಲೇ ಉಡುಪಿಯ ರಘುಪತಿ ಭಟ್ರ ಪತ್ನಿ ಪದ್ಮಪ್ರಿಯಾ ಕೊಲೆ ಪ್ರಕರಣ ನಡೆಯಿತು. ಅಲ್ಲಿಂದೀಚೆಗೆ ಸಚಿವ ಸಂಪುಟದ ಅನೇಕ ಸಚಿವರು ಒಂದಲ್ಲ ಒಂದು ಹಗರಣಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ ಇಡೀ ಮಹಿಳಾ ಸಮುದಾಯವೇ ತಲೆತಗ್ಗಿಸುವ ಕೆಲಸವನ್ನು ಬಿಜೆಪಿ ಜನಪ್ರತಿನಿಧಿಗಳೆನಿಸಿಕೊಂಡವರು ಮಾಡಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಮಮತಾ ಗಟ್ಟಿ ದೂರಿದರು.