ಮತ ದೋಚಿದವರಿಗೆ ಬೀದರ್ ಜನತೆಯ ಹಿಡಿಶಾಪ

ಈ ಗ್ರಾಮವು 1982ರಲ್ಲಿ ಅಪ್ಪರ್ ಮುಲ್ಲಾಮಾರಿ ಮೆಲ್ದಂಡೆ ಯೋಜನೆಯಲ್ಲಿ ಮುಳುಗಡೆಯಾದಾಗ ಸರ್ಕಾರವು ಇದಕ್ಕೆ ಪುರ್ನವಸತಿ ನಿವೇಶನಗಳನ್ನು ಮಾತ್ರ ನೀಡಿತ್ತು. ಆದರೆ ಮುಲ್ಲಾಮಾರಿ ನದಿಯಲ್ಲಿ ಮನೆ ಹೊಲ ಕಳೆದುಕೊಂಡವರಿಗೆ ಒಮ್ಮೆ ಮಾತ್ರ ಅಲ್ಪ ಪರಿಹಾರ ಧನ ಒದಗಿಸಿ ಸಾರ್ವಜನಿಕರಿಗೆ ಬೇಕಾಗುವ ಮೂಲಭೂತ ಸೌಕರ್ಯಗಳಿಂದ ಗ್ರಾಮ ವಂಚಿತವಾಗಿದೆ.
ಈ ಗ್ರಾಮಕ್ಕೆ ಶರಣನಗರ ಎಂಬ ಪುನರ್ನಾಮಕರಣವೇನೋ ಆಗಿದೆ. ಬಡವರು ಬಡವರಾಗಿಯೆ ಉಳಿದಿದ್ದಾರೆ. ಇಲ್ಲಿಯ ಸಾರ್ವಜನಿಕ ಸ್ಥಳಗಳಾದ ಸಮುದಾಯ ಭವನದ ಕಟ್ಟಡ ಮತ್ತು ಹನುಮಾನ ದೇಗುಲ, ಬೀರಪ್ಪನ ಗುಡಿ, ಮರಗೆಮ್ಮನ ಗುಡಿ, ಲಕ್ಷ್ಮೀ ಮಂದಿರ, ಮಹಾದೇವನ ಗುಡಿ, ಮುಸ್ಲಿಂ ಮಜಿದ್ ದರ್ಗಾ ಮತ್ತು ಬೌದ್ಧ ವಿಹಾರ ಮೊದಲಾದ ಸಾರ್ವಜನಿಕ ಕಟ್ಟಡಗಳು ಗ್ರಾಮ ಪುನರ್ವಸತಿಯಾಗಿ 30 ವರ್ಷ ಕಳೆದರೂ ಕೂಡ ಇನ್ನೂ ಕಾಮಗಾರಿಗಳು ಅರ್ಧಕ್ಕೆ ಉಳಿದಿವೆ.
ಬೀದರ ಜಿಲ್ಲೆಯಲ್ಲಿ ಬಹುತೇಕ ಗ್ರಾಮಗಳ ತಾಂಡಾಗಳಿಗೂ ಕೋಟಿಗಳ ಲೆಕ್ಕಚಾರದ ಖರ್ಚಿನಲ್ಲಿ ಡಾಂಬರೀಕರಣವಾದ ರಸ್ತೆಗಳು ಸಿಗುತ್ತವೆ. ಆದರೆ ಈ ಗ್ರಾಮಕ್ಕೆ ಮಾತ್ರ ಸರ್ಕಾರದ ಶಾಪ ತಟ್ಟಿದಂತಿದೆ. ಎಷ್ಟೋ ಶಾಸಕರು ಬಂದರೂ ಹೋದರು ಆದರೆ ಇಲ್ಲಿಯ ಗ್ರಾಮಗಳ ರಸ್ತೆಯ ಕಾಮಗಾರಿಗಳು ವೇದಿಕೆಯ ಭಾಷಣದಲ್ಲಿ ಮತ್ತು ಕಛೇರಿಯ ಕಾಗದಗಳಲ್ಲಿ ಮಾತ್ರ ಮುಗಿದು ಹೋಗುತ್ತಿವೆ.
ಇದು ಮುಗ್ದ ಗ್ರಾಮೀಣ ಜನರಿಗೆ ತೀರಾ ನೋವು ತಂದಿದೆ. ಇಂತಹ ಸಮಸ್ಯೆ ಇರುವ ಗ್ರಾಮೀಣ ಜನರ ನೋವುಗಳಿಗೆ ಸ್ಪಂದಿಸದ ಜನ ನಾಯಕರುಗಳಿಗೆ ಈ ಗ್ರಾಮದ ಶಾಪ ತಟ್ಟುತ್ತದೆ ಎಂದು ಗ್ರಾಮಸ್ಥರು ನಿತ್ಯ ಹಿಡಿಶಾಪ ಹಾಕುತಿದ್ದಾರೆ. ಬರಿ ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಂದು ಮತ ದೋಚಿಕೊಂಡು ಬಡವರ ಸಮಸ್ಯೆಗಳಿಗೆ ಸ್ಪಂದಿಸದ ಜನ ಪ್ರತಿನಿಧಿಗಳಿಗೆ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸುವುದಾಗಿ ಗ್ರಾಮಸ್ಥರು ಹೇಳುತ್ತಿದ್ದಾರೆ.












Click it and Unblock the Notifications