ಸಿಎಂ ಸಮ್ಮುಖದಲ್ಲೇ ಪ್ರಾಣಿಬಲಿ,ಕಾನೂನು ಉಲ್ಲಂಘನೆ
ಮುಖ್ಯಮಂತ್ರಿಗಳ ತವರೂರಾದ ಸುಳ್ಯ ತಾಲೂಕಿನ ದೇವರಗುಂಡದಲ್ಲಿ ನಡೆದ ರಕ್ತೇಶ್ವರಿ ಮತ್ತು ವಿಷ್ಣುಮೂರ್ತಿ ದೈವಾರಾಧನೆ (ತುಳುನಾಡಿನ ಭಾಷೆಯಲ್ಲಿ ಕೋಲ ಎಂದು ಕರೆಯಲಾಗುವುದು) ಸಮಯದಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಎದುರಲ್ಲೇ ಕೋಳಿ ಬಲಿ ನೀಡಲಾಗಿದೆ. ದೈವ ಕ್ಷೇತ್ರದ ನಂಬಿಕೆಯಂತೆ ದೈವಕ್ಕೆ ಕೋಳಿ ಬಲಿ ನೀಡುವುದು ವಾಡಿಕೆ. ಹಾಗಾಗಿ ಸಿಎಂ ಮತ್ತು ಮಾಧ್ಯಮದ ಎದುರೇ ಕೋಳಿ ಬಲಿ ನೀಡಿ, ಸಿಎಂ ಪತ್ನಿ ದೈವಕ್ಕೆ ಓಲೆ ಸಮರ್ಪಿಸಿದ್ದಾರೆ. ಸಿಎಂ ಕುಟುಂಬದ ಹಿರಿಯರ ಆದೇಶದಂತೆ ಈ ದೈವಾರಾಧನೆ ನಡೆಸಲಾಗಿದೆ.
ದೈವ, ಧರ್ಮವನ್ನು ನಂಬಿಕೊಂಡು ಬಂದ ನಿಮಗೆ ನಮ್ಮ ಅನುಗ್ರಹವಿದೆ. ಯಾವುದಕ್ಕೂ ಅಂಜದೆ ಧೈರ್ಯದಿಂದ ಮುಂದುವರಿಯಿರಿ. ನಿಮ್ಮ ಸಂಕಷ್ಟವೆಲ್ಲಾ ಪರಿಹಾರವಾಗಿದೆ. ಕುಟುಂಬಕ್ಕೆ, ನಾಡಿಗೆ ಸುಭಿಕ್ಷವಾಗಲಿದೆ ಎಂದು ದೈವವು ಮಲಯಾಳಿ ಭಾಷೆಯಲ್ಲಿ ಸಿಎಂ ಮತ್ತು ಕುಟುಂಬವನ್ನು ಹರಸಿದೆ.
ದೈವ ಕ್ಷೇತ್ರದಲ್ಲಿ ನಡೆದ ಕೋಳಿ ಬಲಿಯನ್ನು ಸಮರ್ಥಿಸಿಕೊಂಡಿರುವ ಗ್ರಾಮದ ಹಿರಿಯರು, ಈ ದೈವಕ್ಷೇತ್ರದಲ್ಲಿ ಕೋಳಿ ಬಲಿ ನೀಡುವುದು ಒಂದು ಸಂಪ್ರದಾಯ. ಆ ಬಲಿ ನೀಡದಿದ್ದಲ್ಲಿ ಇನ್ನೊಂದು ತೊಂದರೆ ಎದುರಿಸ ಬೇಕಾಗುತ್ತದೆ. ರಾಜ್ಯದ ಇತರ ಭಾಗಗಲ್ಲಿ ಕೋಣ ಬಲಿ ನೀಡುವ ಹಾಗೆ ಇದು ಕೂಡಾ ಎಂದು ಹೇಳಿಕೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಿಎಂ ಕುಟುಂಬ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್, ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಹಾಜರಿದ್ದರು.
ಈ ವಿಷಯ ಈಗಾಗಲೇ ವಿವಾದ ಎಬ್ಬಿಸುವ ಎಲ್ಲಾ ಲಕ್ಷಣಗಳು ಕಾಣಿಸಿ ಕೊಳ್ಳುತ್ತಿದ್ದು ಮಾಧ್ಯಮದಲ್ಲಿ ಚರ್ಚೆಗಳು ಆರಂಭವಾಗಿವೆ.