ಅಪ್ಪನ ಸಾಧನೆಗಳಿಗೆ ಎಳ್ಳುನೀರು ಬಿಟ್ಟ ಕುಮಾರ ಬಂಗಾರಪ್ಪ

ಕುಟುಂಬದಿಂದ ಎಂದೋ ಬೇರ್ಪಟ್ಟು, ಅಪ್ಪನ ಸಾವಿನ ನೆರಳಲ್ಲಿ ರಾಜಕೀಯ ನೆಲೆ ಕಂಡುಕೊಳ್ಳಲು ತಹತಹಿಸುತ್ತಿರುವ ಕುಮಾರ್ ಅವರಲ್ಲಿ ಅನಾಥ ಪ್ರಜ್ಞೆ ತುಸು ಹೆಚ್ಚೇ ಅನಿಸುವಷ್ಟು ಕಾಣುತ್ತಿದೆ. ಅಪ್ಪನ ಸಾಧನೆಗಳನ್ನು (ಬಗರ್ ಹುಕುಂ, ಆಶ್ರಯ, ಗ್ರಾಮೀಣ ಕೃಪಾಂಕ ಮುಂತಾದವು) ತುಳಿಯುವ ಭರದಲ್ಲಿ, ಅದಕ್ಕಿಂತ ಹೆಚ್ಚಾಗಿ ಪಕ್ಷ ನಿಷ್ಠೆ ಮೆರೆಯಲು ತಮ್ಮ ರಾಜಕೀಯ ಪಕ್ಷಕ್ಕೆ ಬಹುಪರಾಕ್ ಅಂದಿದ್ದಾರೆ. ಅವರ ಮಾತುಗಳಲ್ಲೇ ಕೇಳಿ...
'ಮುಖ್ಯಮಂತ್ರಿಯಾಗಿ ಎಸ್. ಬಂಗಾರಪ್ಪ ಅವರು ಮಾಡಿದ್ದ ಅಷ್ಟೂ ಸಾಧನೆಗಳು ವೈಯಕ್ತಿಕವಾಗಿ ಅವರು ಮಾಡಿದ್ದಲ್ಲ. ಅವರು ನಿಮಿತ್ತ ಮಾತ್ರ. ಅದನ್ನೆಲ್ಲ ಮಾಡಿದ್ದು ಕಾಂಗ್ರೆಸ್ ಪಕ್ಷ. ಸಾಧನೆಗಳ ಶ್ರೇಯಸ್ಸೆಲ್ಲ ಕಾಂಗ್ರೆಸ್ಸಿಗೇ ಸಲ್ಲಬೇಕು' ಎಂದು ಠರಾವು ಹೊರೆಡಿಸಿದ್ದಾರೆ. ಇದನ್ನು ಕೇಳಿ ಬಂಗಾರಪ್ಪನವರ ಆತ್ಮ ಮಮ್ಮಲ ಮರುಗಿದೆ.
ಸಂದರ್ಶನದಲ್ಲಿ ತಮ್ಮ ವಾಗ್ದಾಳಿ ಮುಂದುವರಿಸಿದ ಕುಮಾರ್, 'ಬಂಗಾರಪ್ಪ ಅವರು ಬಿಜೆಪಿಗೆ ಹೋದ್ರು, ಜೆಡಿಎಸ್ ಗೆ ಬಂದ್ರು. ಆಗೆಲ್ಲ ಅಂತಹ ಯಾವ ಸಾಧನೆಯನ್ನು ಮಾಡಿದ್ದಾರೆ. ಅಂತಹ ಸಾಧನೆ ಮಾಡಲು ಯಾವ ಪಕ್ಷ ಅವರಿಗೆ ಅನುವು ಮಾಡಿಕೊಟ್ಟಿತು' ಎಂದು ಪ್ರಶ್ನಿಸಿದ್ದಾರೆ.
ಸರಿ, ವಸಂತಣ್ಣ. ನಿಮ್ಮ ಮಾತುಗಳನ್ನು ಒಪ್ಪಿಕೊಳ್ಳೋಣ ಅಂತಿಟ್ಕೊಳ್ಳಿ. ಆದರೆ ಬಂಗಾರಪ್ಪಗೆ ಮೊದಲು ಮತ್ತು ನಂತರವೂ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಆಗಿನ ಮುಖ್ಯಮಂತ್ರಿಗಳು ನಡೆಸಿದ ಆಡಳಿತವೂ ನಿಮಿತ್ತ ಮಾತ್ರವೇ? ಇನ್ನೊಂದು, ಬಂಗಾರಪ್ಪ ಮಾಡಿದ ಸಾಧನೆಗಳನ್ನು ಇತರೆ ಎಲ್ಲ ಕಾಂಗ್ರೆಸ್ ಮುಖ್ಯಮಂತ್ರಿಗಳೂ ಮಾಡಿದ್ದಾರಾ? ನಿಮಗೆ ಹಾಗನ್ನಿಸುತ್ತದಾ?












Click it and Unblock the Notifications