ಸಂಕ್ರಾಂತಿಗೆ ನಾನೇ ಬದಲಾಗುತ್ತೇನೆ : ಯಡಿಯೂರಪ್ಪ
ಬಿಜೆಪಿ ಹೈಕಮಾಂಡ್ ಕರೆದರೆ ನಾನ್ಯಾಕೆ ಹೋಗಬೇಕು, ಬೇಕಿದ್ದರೆ ಹಿರಿಯರೇ ಇಲ್ಲಿಗೆ ಬರಲಿ ಎಂದು ದಾರ್ಷ್ಟ್ಯನನ್ನು ತೋರಿಸಿದ್ದ ಯಡಿಯೂರಪ್ಪ, ನಾನು ಖಂಡಿತ ಬಿಜೆಪಿ ತೊರೆಯುವುದಿಲ್ಲ, ಸದ್ಯದಲ್ಲಿಯೇ ಆಪರೇಷನ್ ಬಿಜೆಪಿ ಆರಂಭಿಸಲಿದ್ದೇನೆ ಎಂದು ಹೇಳಿ ಅವರ ಬೆಂಬಲಿಗರಿಗೇ ಅಚ್ಚರಿ ಮೂಡಿಸಿದ್ದಾರೆ.
ಜ.22ರ ನಂತರ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಪ್ರವಾಸ ಕೈಗೊಂಡು ಬಿಜೆಪಿಯನ್ನು ಬಲಪಡಿಸುತ್ತೇನೆ ಎಂದು ಅವರು ನುಡಿದಿದ್ದಾರೆ. ಆದರೆ, ದಿನಕ್ಕೊಂದು ಹೇಳಿಕೆಯನ್ನು ನೀಡುವ ಯಡಿಯೂರಪ್ಪನವರ ರಾಜಕೀಯ ನಡೆಗಳನ್ನು ಅರಿಯುವುದು ಅಷ್ಟು ಸುಲಭದ ಮಾತಲ್ಲ ಎಂಬುದು ರಾಜಕೀಯ ಪಂಡಿತರ ಅನಿಸಿಕೆ.
ಸಂಕ್ರಾಂತಿಗೆ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಾಯಿಸುವ ಸಂದರ್ಭದಲ್ಲಿ ಯಡಿಯೂರಪ್ಪನವರು ತಾವೇ ಬದಲಾಗುತ್ತಿರುವುದಾಗಿ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಬಿಜೆಪಿಯಲ್ಲಿಯೇ ಉಳಿಯುತ್ತಾರಾ ಅಥವಾ ಸೂರ್ಯ ತನ್ನ ಪಥ ಬದಲಿಸಿದಂತೆ ರಾಜಕೀಯ ದಿಕ್ಕನ್ನೇ ಬದಲಿಸುತ್ತಾರಾ ಕಾದು ನೋಡಬೇಕಿದೆ.
ಮತ್ತೆ ಭಿನ್ನಮತದ ಬಿರುಗಾಳಿ : ಮುರುಗೇಶ್ ನಿರಾಣಿಯವರು ಯಡಿಯೂರಪ್ಪ ಪರ ವಕಾಲತ್ತು ವಹಿಸಿ ದೆಹಲಿ ವರಿಷ್ಠರನ್ನು ಭೇಟಿಯಾಗಿರುವ ಹಂತದಲ್ಲಿ, ಪಕ್ಷೇತರ ಶಾಸಕರು ಸೇರಿದಂತೆ ಸುಮಾರು 14 ಶಾಸಕರು ಮತ್ತೆ ರೆಸಾರ್ಟ್ ರಾಜಕೀಯ ಶುರುಮಾಡಿಕೊಂಡಿದ್ದಾರೆ. ಅವರೆಲ್ಲ ಶನಿವಾರ ಗೋವಾದ ರೆಸಾರ್ಟಿಗೆ ತೆರಳಿ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ವರ್ಷ ಯಡಿಯೂರಪ್ಪ ವಿರುದ್ಧ ದಂಗೆಯೆದ್ದಿದ್ದ ಭಿನ್ನಮತೀಯ ಶಾಸಕರ ಬಳಗವೇ ಗೋವಾಗೆ ತೆರಳುತ್ತಿದೆ. ಸಂಪಂಗಿ, ಸಾರ್ವಭೌಮ ಬಗಲಿ, ಗೂಳಿಹಟ್ಟಿ ಶೇಖರ್, ಬೇಳೂರು ಗೋಪಾಲಕೃಷ್ಣ ಮುಂತಾದವರ ದಂಡು ರೆಸಾರ್ಟಿಗೆ ತೆರಳುತ್ತಿದೆ. ರೇಣುಕಾಚಾರ್ಯ ಅವರು ರೆಡ್ಡಿ ಬಣದ ಜೊತೆ ಸಂಧಾನಕ್ಕಾಗಿ ಯತ್ನಿಸುತ್ತಿದ್ದಾರೆ ಎಂಬ ಮಾತು ಕೇಳಿಬಂದಿರುವ ಹಂತದಲ್ಲಿಯೇ ರೆಸಾರ್ಟ್ ರಾಜಕೀಯ ಶುರುವಾಗಿರುವುದು ಭಾರೀ ಕುತೂಹಲ ಕೆರಳಿಸಿದೆ.