ರೆಡ್ಡಿ ಜೊತೆ ಸಂಧಾನಕ್ಕೆ ಯಡ್ಡಿ ಬಂಟ ರೇಣು ಹೊಂಟ
ಯಡ್ಡಿ ಬಂಟ ರೇಣುಕಾಚಾರ್ಯದ ಸವಾರಿ ಜೈಲುಹಕ್ಕಿ ಜನಾರ್ದನ ರೆಡ್ಡಿಯತ್ತ ಸಾಗಿರುವುದು ಎಲ್ಲೆಡೆ ಈಗಾಗಲೇ ಸುದ್ದಿಯಾಗಿದೆ. ಆದರೆ, ಯಡಿಯೂರಪ್ಪ ರೆಡ್ಡಿಯನ್ನು ಕಟ್ಟಿಕೊಂಡು ಏನು ಸಾಧಿಸುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಹೊಸ ಪಕ್ಷ ಉದಯಕ್ಕೆ ನಾಂದಿ?: ರೇಣುಕಾಚಾರ್ಯ ಮತ್ತು ಅಸ್ನೋಟಿಟಿಕರ್ ಅವರನ್ನು ರೆಡ್ಡಿ ಬಳಿಗೆ ಕಳಿಸಿರುವ ಯಡಿಯೂರಪ್ಪ ಲಿಂಗಾಯತ ಸಮುದಾಯದ ಬೆಂಬಲದಿಂದ ಹೊಸ ರಾಜಕೀಯ ಪಕ್ಷ ರಚಿಸಲು ಮುಂದಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ.
ಬಿಎಸ್ ವೈ ಬೆಂಬಲಿಗರ ಜೊತೆ ಪಕ್ಷೇತರ ಶಾಸಕ ಶ್ರೀರಾಮುಲು ಮತ್ತು ರಾಯಚೂರು ಸಂಸದ ಫಕೀರಪ್ಪ, ಸುರೇಶ್ ಗೌಡ, ಹರೀಶ್ಜೀವರಾಜ್, ಸಂಗಣ್ಣ ಕರಡಿ ಮುಂತಾದವರು ಚಂಚಲಗುಡ ಜೈಲಿಗೆ ತೆರಳುವ ಸಾಧ್ಯತೆಯಿದೆ.
ಬಹುಶಃ ಮುಂದಿನ ವಾರದೊಳಗೆ ಚಂಚಲಗುಡ ಜೈಲಿನಲ್ಲಿ ಜನಾರ್ದನ ರೆಡ್ಡಿ ಭೇಟಿ ಮಾಡಲಿರುವ ರೇಣುಕಾಚಾರ್ಯ 15-20 ಶಾಸಕರನ್ನು ತಮ್ಮೊಟ್ಟಿಗೆ ಕರೆದೊಯ್ಯಲಿದ್ದಾರೆ. ಯಡಿಯೂರಪ್ಪ ಅವರ ಸಮರ್ಥಕ್ಕೆ ತಕ್ಕ ಸ್ಥಾನ ಕಲ್ಪಿಸುವಂತೆ ಆಗ್ರಹಿಸಲಿದ್ದಾರೆ.
ಬಳ್ಳಾರಿ ರೆಡ್ಡಿಗಳಿಗೆ ನಿಷ್ಠರಾಗಿರುವ ಶಾಸಕರನ್ನು ಓಲೈಸಿಕೊಳ್ಳುವುದರಲ್ಲಿ ಯಡ್ಡಿ ಬಣ ಸಫಲವಾದರೆ, ಬಿಜೆಪಿ ಅಪಾಯ ಕಟ್ಟಿಟ್ಟ ಬುತ್ತಿ. ಶ್ರೀರಾಮುಲು ಕೂಡಾ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಇನ್ನೂ ನೋಂದಣಿಯಾಗದಿರುವುದು ಹಲವು ಅನುಮಾನಕ್ಕೆ ಕಾರಣಗಳಾಗಿದೆ. ರೆಡ್ಡಿ ಹಾಗೂ ಯಡ್ಡಿ ಮತ್ತೆ ಜೊತೆಗೂಡಿ ಹೊಸ ಪಕ್ಷ ಸೃಷ್ಟಿಸುತ್ತಾರೆ ಎಂದು ಹಲವರು ನಂಬಿದ್ದಾರೆ.
ಅತ್ತ ಶೋಭಾ ನಂತರ ಅಶೋಕ್ ದೆಹಲಿಯಲ್ಲಿ ಲಾಬಿ ನಡೆಸುತ್ತಿರುವುದು ಬಿಜೆಪಿಗೆ ಬಿಸಿ ತುಪ್ಪವಾಗಿದೆ. ಯಡ್ಡಿಗೆ ಸದ್ಯಕ್ಕೆ ಅಡ್ವಾಣಿ ಶತ್ರುವಾಗಿ ಪರಿಣಮಿಸಿದ್ದಾರೆ.