ಅಮ್ಮನ ತಿಥಿ ಇದೆ; ಪೆರೋಲ್ ಮೇಲೆ ಬಿಡುಗಡೆ ಮಾಡಿ: ರೆಡ್ಡಿ

ರೆಡ್ಡಿ ಜತೆಗೆ ಅವರ ಬಾವ ಬಿ.ವಿ. ಶ್ರೀನಿವಾಸ ರೆಡ್ಡಿ ಅವರೂ ಸಹ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ, ಖಾಯಂ ಜಾಮೀನಿಗಾಗಿ ಜನಾರ್ದನ ರೆಡ್ಡಿ, ಶ್ರೀನಿವಾಸ ರೆಡ್ಡಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಶುಕ್ರವಾರಕ್ಕೆ ನಿಗದಿಯಾಗಿದೆ.
ಡಿಸೆಂಬರ್ 31ರಂದು ಜನಾರ್ದನ ರೆಡ್ಡಿ ಅವರ ತಾಯಿಯ ಪುಣ್ಯತಿಥಿ ಇದ್ದು, ಎರಡು ದಿನಗಳ ಮಟ್ಟಿಗೆ ಜೈಲಿನ ಭದ್ರತಾ ಸಿಬ್ಬಂದಿ ಬೆಂಗಾವಲಿನಲ್ಲಿ ಬಳ್ಳಾರಿಗೆ ಭೇಟಿ ನೀಡಲು ನ್ಯಾಯಾಲಯದ ಅನುಮತಿ ಕೋರಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿದ ನ್ಯಾಯಾಲಯ ಇದಕ್ಕೆ ಸಿಬಿಐನ ಆಕ್ಷೇಪ ಇದೆಯೇ ಎನ್ನುವುದನ್ನು ಶುಕ್ರವಾರ ತಿಳಿಸುವಂತೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.
11 ವರ್ಷಗಳ ಹಿಂದೆ ತಾಯಿಯ ಸಾವು: 2000ನೇ ಇಸವಿಯಿಂದ ತಾಯಿಯ ಪುಣ್ಯತಿಥಿಯಲ್ಲಿ ನಿರಂತರವಾಗಿ ಪಾಲ್ಗೊಳ್ಳುತ್ತಿದ್ದು, ತನ್ನಿಮಿತ್ತ ಬಳ್ಳಾರಿಯಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಈ ಕಾರಣಕ್ಕಾಗಿ ನ್ಯಾಯಾಲಯ ಅನುಮತಿ ನೀಡುವಂತೆ ವಿನಂತಿ ಮಾಡಿದ್ದಾರೆ.
ಓಬಳಾಪುರಂ ಮೈನಿಂಗ್ ಕಂಪೆನಿ (ಒಎಂಸಿ) ನಡೆಸಿದ ಅಕ್ರಮ ಗಣಿಗಾರಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎನ್ನುವ ಕಾರಣದ ಹಿನ್ನೆಲೆಯಲ್ಲಿ ರೆಡ್ಡಿದ್ವಯರನ್ನು ಸಿಬಿಐ ಕಳೆದ ಸೆಪ್ಟೆಂಬರ್ 5ರಂದು ಬಳ್ಳಾರಿಯಲ್ಲಿ ಬಂಧಿಸಿದ್ದು, ಇಬ್ಬರೂ ಈಗ ಚಂಚಲಗೂಡ ಜೈಲಿನಲ್ಲಿದ್ದಾರೆ.
ನ್ಯಾಯಾಂಗ ಬಂಧನ ವಿಸ್ತರಣೆ: ವಿಡಿಯೊ ಕಾನ್ಫರೆನ್ಸ್ ಮೂಲಕ ಗುರುವಾರ ರೆಡ್ಡಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಇವರಿಬ್ಬರ ಜತೆಗೆ ಆಂಧ್ರ ಪ್ರದೇಶ ಗಣಿ ಇಲಾಖೆ ಮಾಜಿ ನಿರ್ದೇಶಕ ವಿ.ಡಿ.ರಾಜಗೋಪಾಲ್ ಅವರ ನ್ಯಾಯಾಂಗ ಬಂಧನ ಜನವರಿ 12ರ ವರೆಗೆ ವಿಸ್ತರಿಸಿತು.












Click it and Unblock the Notifications