ಯಲಹಂಕ ಶಾಸಕ ವಿಶ್ವನಾಥನನ್ನು ಆ ಲಲಿತೆಯೂ ಕಾಪಾಡಲಿಲ್ಲ!

ಹೌದು ಮೊನ್ನೆ ಶನಿವಾರ ಶಾಸಕ ವಿಶ್ವನಾಥರ ಪತ್ನಿ ವಾಣಿಶ್ರಿ ವಿಶ್ವನಾಥ್ ಅವರ ಹುಟ್ಟುಹಬ್ಬವಿತ್ತು. ಹೇಳಿಕೇಳಿ, ವಾಣಿಶ್ರೀ ಅವರೂ ಜಿಲ್ಲಾ ಪಂಚಾಯತ್ ಸದಸ್ಯರು. ಹಾಗಾಗಿ, ಶಾಸಕ ಮಹಾಶಯರು ಭರ್ಜರಿಯಾಗಿಯೇ ಪತ್ನಿಯ ಹುಟ್ಟುಹಬ್ಬ ಆಚರಿಸಿದ್ದಾರೆ. ಶನಿವಾರ ಯಲಹಂಕದಲ್ಲಿ ಅದ್ದೂರಿಯಾಗಿ, ಆಡಂಬರದಿಂದ ಲಲಿತಾ ಸಹಸ್ರನಾಮ ಮತ್ತು ಕುಂಕುಮಾರ್ಚನೆಯನ್ನು ಖುದ್ದು ಈ ದಂಪತಿಯೇ ಕುಳಿತು ನೆರವೇರಿಸಿದೆ.
ಜನ ಸಹ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿ, ಪುನೀರತಾಗಿದ್ದಾರೆ. ಆದರೆ ತಾಯಿ ಲಲಿತಾದೇವಿ ಮಾತ್ರ ಅವರ ಮೇಲೆ ಕೃಪಾಕಟಾಕ್ಷ ಬೀರಿಲ್ಲ. ಶಿವಪೂಜೆಯಲ್ಲಿ ಕರಡಿ ಬಂದಂತೆ ಲೋಕಾಯುಕ್ತ ಪೊಲೀಸರು ಯಾವ ಮಾಯದಲ್ಲಿ ಯಾವ ರೂಪದಲ್ಲಿ ಬಂದು ಇವರ ವೈಭೋಗವನ್ನು ಶನಿವಾರ ಇಣುಕಿ ನೋಡಿಕೊಂಡು ಹೋದರೋ, ಸೋಮವಾರ ಬೆಳಗ್ಗೆಯೇ ದಾಳಿ ಮಾಡಿಬಿಟ್ಟಿದ್ದಾರೆ.
ಆದರೆ ವಿಶ್ವನಾಥ ದಂಪತಿ ಮಾತ್ರ ಏನೂ ನಡೆದೇ ಇಲ್ಲ ಎಂಬಂತೆ ರಾಜಾರೋಷವಾಗಿದ್ದಾರೆ. ದೂರುದಾರ ಶಶಿಧರ್ ಈಗಾಗಲೇ ಕೋರ್ಟಿಗೆ ಬರೋಬ್ಬರಿ 179 ದಾಖಲೆಗಳನ್ನು ಸಲ್ಲಿಸಿ, ಕೇಸ್ ಜಡಿದಿದ್ದಾರೆ. ವಿಶ್ವನಾಥ ದಂಪತಿಯ ಅಕ್ರಮ ಆಸ್ತಿ ಬಗ್ಗೆ ಮನವರಿಕೆಯಾದ ನಂತರವೇ ನ್ಯಾ. ಸುಧೀಂದ್ರರಾವ್ ಅವರು ದಾಳಿಗೆ ಆದೇಶಿಸಿರುವುದು.
ಅಂದಹಾಗೆ ಈ ರಾಜಕಾರಣದಲ್ಲಿ ದಿಢೀರನೆ ಪ್ರವರ್ಧನಮಾನಕ್ಕೆ ಬಂದ ಈ ದಂಪತಿ ಅತ್ಯಂತ ಮಹತ್ವಾಕಾಂಕ್ಷಿಗಳು. ಯಲಹಂಕ ಸುತ್ತಮುತ್ತ ಪಾಳೆಗಾರರಾಗಿ ಮೆರೆಯುವ ಅದಮ್ಯ ಉತ್ಸಾಹ ವಿಶ್ವನಾಥರದು. ನಾಡಪ್ರಭು ಕೆಂಪೇಗೌಡರಿಗಿಂತಲೂ ತನ್ನದು ಒಂದು ಕೈಮೇಲು ಎಂಬ ಭಾವ ಇವರದು.
ಈ ಸಂಬಂಧ 'ದಟ್ಸ್ ಕನ್ನಡ' ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದು, ಯಲಹಂಕ ಸುತ್ತಮುತ್ತ ಇವರ ಜನಪರ ಸೇವೆಗಳ ಸಮಗ್ರ ಚಿತ್ರಣ ನೀಡಲಾಗುವುದು.












Click it and Unblock the Notifications