ಬೆಳಗಾವಿ ಪಾಲಿಕೆ ಸೂಪರ್ಸೀಡ್, ಎಲ್ಲೆಲ್ಲೂ ಸಂಭ್ರಮ

ಈ ಕುರಿತು ಈಗ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಕೃಷ್ಣಾ ಮೇಲ್ದಂಡೆ ಅವ್ಯವಹಾರ ಕುರಿತು ನಡೆಯುತ್ತಿರುವ ಚರ್ಚೆಯ ಬಳಿಕ ಸೂಪರ್ ಸೀಡ್ ಮಾಡುವ ಘೋಷಣೆ ಹೊರಬಿದ್ದಿದೆ. ಬೆಳಗಾವಿಯಲ್ಲಿ ಆಡಳಿತ ನಡೆಸಲು ಆಡಳಿತಾಧಿಕಾರಿ ನೇಮಿಸಲು ತೀರ್ಮಾನಿಸಲಾಗಿದೆ.
ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು 20 ಅಂಶಗಳನ್ನು ಸರಕಾರ ಪಟ್ಟಿ ಮಾಡಿದ್ದು, ಅವುಗಳಲ್ಲಿ ಪ್ರಮುಖವಾದವು, ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ್ದು, ಕನ್ನಡ ವಿರೋಧಿಸಿ ನಾಡದ್ರೋಹ ಎಸಗಿದ್ದು, ಕಂಬಾರರಿಗೆ ಅವಮಾನ ಮಾಡಿದ್ದು, ನಾಡು-ನುಡಿಗೆ ಅಗೌರವ ತೋರಿದ್ದು, ಹಣಕಾಸು ದುರ್ಬಳಕೆ ಮಾಡಿದ್ದು.
ದುರಹಂಕಾರದ ವರ್ತನೆ ತೋರಿದ್ದ ಬೆಳಗಾವಿ ಮೇಯರ್ ಮಂದಾ ಬಾಳೆಕುಂದ್ರಿಗೆ ನ.26ರಂದು ನೋಟೀಸ್ ನೀಡಲಾಗಿತ್ತು. ಮಂದಾ ಡಿ.9ರಂದು ಪತ್ರಕ್ಕೆ ಉತ್ತರಿಸಿ ಸೂಪರ್ ಸೀಡ್ ಮಾಡಬಾರದು, ಪೂರ್ತಿ ಅವಧಿ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸರಕಾರವನ್ನು ಅಂಗಲಾಚಿದ್ದರು. ಈ ಕೋರಿಕೆಯನ್ನು ಮನ್ನಿಸದ ಸರಕಾರ ಸೂಪರ್ ಸೀಡ್ ಮಾಡಲು ನಿರ್ಧರಿಸಿದೆ.
ರಾಜ್ಯದ ಎಲ್ಲೆಲ್ಲೂ ಸಂಭ್ರಮ : ಈ ಸುದ್ದಿ ಹೊರಬೀಳುತ್ತಿದ್ದಂತೆ ಕರ್ನಾಟಕದ ಎಲ್ಲೆಡೆ ಕನ್ನಡಪರ ಸಂಘಟನೆಗಳು ಬೀದಿಗಿಳಿದು, ಪಟಾಕಿ ಸಿಡಿ, ಕನ್ನಡ ಧ್ವಜಗಳನ್ನು ಹಾರಾಡಿಸುತ್ತ ಸಂಭ್ರಮಿಸುತ್ತಿವೆ. ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಕನ್ನಡ ಹೋರಾಟಗಾರರು ನೆರೆದು ಹರ್ಷೋದ್ಘಾರ ಮಾಡಿದರು. ಹುಬ್ಬಳ್ಳಿ, ಬಳ್ಳಾರಿ, ಆನೇಕಲ್ ಗಳಲ್ಲಿಯೂ ಕನ್ನಡಿಗರ ಸಂಭ್ರಮ ಮುಗಿಲುಮುಟ್ಟಿದೆ.












Click it and Unblock the Notifications