ಪೆಪ್ಪರ್ಮಿಂಟ್ ಬೇಡಪ್ಪ ಪಾರ್ಲಿಮೆಂಟ್ ತೋರಿಸು!

ಎಲ್ಲ ಮಕ್ಕಳಂತೆಯೇ ಈ ಮಕ್ಕಳೂ ಕೂಡ. ಆದರೆ, ಅವರ ಆಸೆ ಮಾತ್ರ ಸ್ವಲ್ಪ ವಿಭಿನ್ನ. ಅವರ ಆಸೆಯೊಂದೆ. ಅದು ಸಂಸತ್ ಭವನವನ್ನು ಜೀವಮಾನದಲ್ಲಿ ಒಂದು ಬಾರಿಯಾದರೂ ನೋಡಬೇಕೆಂಬುದು. ಇದರಲ್ಲೇನು ವಿಶೇಷ ಅನ್ನಬೇಡಿ. ಈ ಮಕ್ಕಳು ತಮ್ಮ ತಂದೆ ಸಾಹಸ ತೋರಿ ಭ್ರಷ್ಟರಿಂದ ಕಾಪಾಡಿದ ಸಂಸತ್ ಭವನವನ್ನು ನೋಡಲು ಇಷ್ಟಪಟ್ಟಿರುವುದು ವಿಶೇಷವಲ್ಲವೆ?
ಹೌದು, ಸರಿಯಾಗಿ ಹತ್ತು ವರ್ಷಗಳ ಹಿಂದೆ ಡಿಸೆಂಬರ್ 13ರಂದು ಪಾರ್ಲಿಮೆಂಟಿನ ಮೇಲೆ ಉಗ್ರರು ದಾಳಿ ನಡೆಸಿದ ಸಂದರ್ಭದಲ್ಲಿ ಕೆಚ್ಚೆದೆಯೊಂದಿಗೆ ಕಾದಾಡಿ ಶತ್ರುಗಳನ್ನು ನಿರ್ನಾಮ ಮಾಡಿದ ಸಾಹಸಿಗಳ ಮಕ್ಕಳ ಈ ಪುಟ್ಟ ಕನಸು ಹತ್ತು ವರ್ಷವಾದರೂ ಇನ್ನೂ ಈಡೇರಿಕೆಯಾಗಿಲ್ಲ. ಇದು ಸತ್ಯ ಮತ್ತು ವಿಪರ್ಯಾಸದ ಸಂಗತಿ ಕೂಡ.
ಅಂದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಐವರು ಹತ್ಯೆಯಾಗಿದ್ದರು. ಜೊತೆಗೆ ನಾಲ್ವರು ದೆಹಲಿ ಪೊಲೀಸ್ ಅಧಿಕಾರಿಗಳು, ಇಬ್ಬರು ಸಿಆರ್ಪಿಎಫ್ ಜವಾನರು, ಸಂಸತ್ ಭವನದ ಕಾವಲುಗಾರ, ಮತ್ತೊಬ್ಬ ಸಿಬ್ಬಂದಿಯನ್ನು ಹತ್ಯೆ ಮಾಡಿ ಆ ಚಳಿಗಾಲದಲ್ಲಿ ಬಿಸಿ ನೆತ್ತರು ಹರಿಸಿದ್ದರು.
ಅಂದು ಮೆರೆದ ಸಾಹಸಕ್ಕಾಗಿ ಶೌರ್ಯ ಚಕ್ರ ಪ್ರಶಸ್ತಿ ಪಡೆದ ಸಿಆರ್ಪಿಎಫ್ ಹೆಡ್ ಕಾನ್ಸ್ಟೇಬಲ್ ಸಂತೋಷ್ ಕುಮಾರ್, ಸಬ್ ಇನ್ ಸ್ಪೆಕ್ಟರ್ ವೈಬಿ ಥಾಪಾ, ಆ ದಾಳಿಯಲ್ಲಿ ಹತ್ಯೆಯಾದ ಮಹಿಳೆ ಕಮಲೇಶ್ ಕುಮಾರಿ ಮಕ್ಕಳೆಲ್ಲ ಐತಿಹಾಸಿಕ ಘಟನೆಗೆ ಸಾಕ್ಷಿಯಾದ ಸಂಸತ್ ಭವನವನ್ನು ನೋಡಬೇಕೆಂಬ ಅಭಿಲಾಶೆ ಹೊತ್ತು ಚಾತಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
ಸಮಯ ಸಿಕ್ಕಾಗಲೆಲ್ಲ ಪೆಪ್ಪರ್ ಮಿಂಟ್ ಕೇಳುವ ಬದಲು 'ಅಪ್ಪ, ಪಾರ್ಲಿಮೆಂಟ್ ತೋರಿಸು' ಎಂದು ದುಂಬಾಲು ಬೀಳುತ್ತಾರೆ. ಆದರೇನು ಮಾಡುವುದು, ಬೇರೆ ಕಡೆ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಅಪ್ಪಂದಿರು ನಿರಾಶೆ ವ್ಯಕ್ತಪಡಿಸುತ್ತಾರೆ. ಈ ಮಕ್ಕಳ ಆ ಪುಟ್ಟ ಆಸೆಯನ್ನು ಸರಕಾರ ಈಡೇರಿಸುವುದೆ?












Click it and Unblock the Notifications