ಬಳ್ಳಾರಿ ಚುನಾವಣೆ : ಇಬ್ಬರಿಗೆ ಸೋಲು ಗ್ಯಾರಂಟಿ!

ಭಾನುವಾರ ಬೆಳಿಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆಲ್ಲ ಫಲಿತಾಂಶ ಹೊರಬೀಳಲಿದೆ. ಮತ ಎಣಿಕೆ ಕೇಂದ್ರದಲ್ಲಿ ಭಾರೀ ಭದ್ರತೆ ಒದಗಿಸಲಾಗಿದ್ದು, ಗುರುತಿನ ಚೀಟಿ ಇರುವ ಮಾಧ್ಯಮದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿದೆ.
ಒಟ್ಟು 18 ಸುತ್ತು ಮತ ಎಣಿಕೆ ನಡೆಯಲಿದೆ. ಇದಕ್ಕಾಗಿ 62 ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಭದ್ರತೆಗಾಗಿ 450 ಪೊಲೀಸರನ್ನು ನಿಯೋಜಿಸಲಾಗಿದೆ. ಮತ ಎಣಿಕೆ ಕೇಂದ್ರದ ಸುತ್ತ ಮೆರವಣಿಗೆ ಮಾಡಲು ಅವಕಾಶವಿಲ್ಲ ಮತ್ತು ಸುತ್ತಮುತ್ತಲಿನ ಬಾರ್ ಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಶ್ರೀರಾಮುಲು ಪಕ್ಷೇತರರಾಗಿ, ಗಾದಿ ಲಿಂಗಪ್ಪ ಬಿಜೆಪಿಯಿಂದ ಮತ್ತು ಬಿ ರಾಮ್ ಪ್ರಸಾದ್ ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದ ಪ್ರಮುಖ ಹುರಿಯಾಳುಗಳು. ಅದೇ ಕ್ಷೇತ್ರದಲ್ಲಿ ಅದೇ ಜನರೆದಿರು ಕೈಯೊಡ್ಡಿದ್ದ ಶ್ರೀರಾಮುಲುವನ್ನು ಜನ ಗೆಲ್ಲಿಸುತ್ತಾರಾ? ಬಿಜೆಪಿಯ ಭದ್ರಕೋಟೆಯಾಗಿದ್ದ ಕ್ಷೇತ್ರವನ್ನು ಬಿಜೆಪಿಗೇ ಉಳಿಸಿಕೊಡುತ್ತಾರಾ? ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎಂದು ಕಾಂಗ್ರೆಸ್ಸನ್ನು ಜಯಶಾಲಿಯಾಗಿಸುತ್ತಾರಾ? ಕಾದು ನೋಡಬೇಕು. ದಟ್ಸ್ ಕನ್ನಡದಲ್ಲಿ ಕ್ಷಣಕ್ಷಣದ ವರದಿಯನ್ನು ಓದಲು ಮರೆಯದಿರಿ.
ಸದಾನಂದ ಗೌಡ ವಿಶ್ವಾಸ : ಬಳ್ಳಾರಿ ಗ್ರಾಮೀಣ ಉಪ ಚುನಾವಣೆಯ ಋಣಾತ್ಮಕ ಫಲಿತಾಂಶ ಬಹುಮತವಿರುವ ಬಿಜೆಪಿ ಸರಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಬಿಜೆಪಿ ಅಭ್ಯರ್ಥಿ ಗಾದಿ ಲಿಂಗಪ್ಪ ಗೆದ್ದು ವಿಧಾನಸೌಧವನ್ನು ಪ್ರವೇಶಿಸುತ್ತಾರೆಂಬ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಹೇಳಿದ್ದಾರೆ.












Click it and Unblock the Notifications