ಎಲ್ಲರೂ ಅಮೃತ ಹೀರಿದರು ನಾನು ವಿಷ ಕುಡಿದೆ : ಯಡ್ಡಿ

ಈ ಆಕ್ರೋಶ, ದುಃಖ ಭರಿತ ಭಾವೋದ್ವೇಗದ ಮಾತುಗಳನ್ನು ಆಡಿದವರು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ. ಭೂ ಹಗರಣದಲ್ಲಿ ಸಿಲುಕಿ ಪರಪ್ಪನ ಜೈಲು ಸೇರಿ, ಜೈಲಿನಿಂದ ಹೊರಬಂದ ನಂತರ ರಾಜ್ಯ ಪ್ರವಾಸ ಮಾಡುತ್ತಿರುವ ಯಡಿಯೂರಪ್ಪ ಇಂದು ತಮ್ಮ ತವರಿನ ಜನತೆಯ ಮುಂದೆ ಹೃದಯಾಂತರಾಳದ ಮಾತುಗಳನ್ನು ಆಡಿದರು.
ರಾಜ್ಯದ ಜನತೆಗಾಗಿ ನಾನು ಸಾಕಷ್ಟು ಸಂಕಷ್ಟಗಳನ್ನು ಎದುರಿಸಿದೆ. ಅದೇ ಲಕ್ಷಾಂತರ ಜನತೆ ನಾನು ಜೈಲಿನಲ್ಲಿದ್ದಾಗ ದೀಪಾವಳಿಯನ್ನು ಕೂಡ ಆಚರಿಸಲಿಲ್ಲ. ರಾಜ್ಯದ ಜನ ನನ್ನನ್ನು ಎಂದೂ ಕೈಬಿಡುವುದಿಲ್ಲ. ಬದುಕಿರುವವರೆಗೆ ಅವರಿಗೆ ಋಣಿಯಾಗಿರುತ್ತೇನೆ. ನನಗಾಗಿ ಜನತೆ ಕಣ್ಣೀರು ಹಾಕುವ ಅಗತ್ಯ ಇಲ್ಲ ಎಂದು ಭಾವುಕರಾಗಿ ನುಡಿದರು.
ಮಾತಿನ ಓಘದಲ್ಲಿ ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ. ಪರಮೇಶ್ವರ್ ಅವರ ವಿರುದ್ಧ ತೀವ್ರ ವಾಗ್ದಾಳಿ ಮಾಡಿದರು. ತಾವು ಜೈಲಲ್ಲಿದ್ದಾಗ ಪಾರ್ಟಿ ಆಚರಿಸಿಕೊಂಡ ತಮ್ಮ ಪಕ್ಷದ ಕೆಲ ನಾಯಕರನ್ನೂ ಪರೋಕ್ಷವಾಗಿ ಟೀಕಿಸಿದರು.
ಲೋಕಾಯುಕ್ತ ಸಂಸ್ಥೆ ಮೇಲಿಂದ ಇಳಿದುಬಂದಂತೆ ವರ್ತಿಸುತ್ತಿದೆ. ನ್ಯಾ. ಹೆಗ್ಡೆಯವರಂತೂ ವಿಧಾನಸೌಧದ ಎಲ್ಲರನ್ನೂ ಟೀಕಿಸುವುದನ್ನೇ ಕಾಯಕ ಮಾಡಿಕೊಂಡಿದ್ದರು. ಗಣಿ ಹಗರಣದಲ್ಲಿ ಹಲವಾರು ನಾಯಕರ, ಅಧಿಕಾರಿಗಳ ಕೈವಾಡವಿದೆ. ಸಮಯ ಬಂದಾಗ ಎಲ್ಲ ಬಯಲು ಮಾಡುವೆ ಎಂದು ಶಿಕಾರಿಪುರದಲ್ಲಿ ಯಡಿಯೂರಪ್ಪ ಗುಡುಗಿದರು.
ಕೊನೆಯಲ್ಲಿ, ನನ್ನ ವಿರುದ್ಧ ಸುಳ್ಳು ಕೇಸು ಹಾಕಿದವರಿಗೆ ಪಶ್ಚಾತ್ತಾಪವಾಗುತ್ತದೆ. ನಾನು ನಿರಪರಾಧಿಯಾಗಿ ಹೊರಬರುತ್ತೇನೆ. ಏನೇ ಆಗಲಿ ಬಿಜೆಪಿಯನ್ನಂತೂ ಬಿಡುವುದಿಲ್ಲ. ಬಿಡುವ ಪ್ರಶ್ನೆಯೇ ಇಲ್ಲ. ಬಳ್ಳಾರಿ ಉಪ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸುವ ವಿಶ್ವಾಸವಿದೆ ಎಂದು ಅವರು ನುಡಿದರು.












Click it and Unblock the Notifications