ಯಡ್ಡಿ ಬಿಡುಗಡೆಯೊಂದಿಗೆ ಬೀಸಿದೆ ಭಾರೀ ಚಳಿಗಾಳಿ

ಕೆಲವೇ ದಿನಗಳ ಹಿಂದೆ ಸದ್ಯದಲ್ಲಿಯೇ ರಾಜ್ಯದ ರಾಜಕೀಯ ರಂಗದಲ್ಲಿ ಭಾರಿ ಬದಲಾವಣೆ ಆಗಲಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದರು. ರಾಜಕೀಯ ಸನ್ನಿವೇಶದಲ್ಲಿ ಸಾಕಷ್ಟು ಏರಿಳಿತಗಳಾಗಲಿವೆ ಎಂದು ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ನುಡಿದಿದ್ದರು. ಭ್ರಷ್ಟಾಚಾರ ಆರೋಪದಿಂದ ಹೊರಬಂದು ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ನಿತೀನ್ ಗಡ್ಕರಿ ಕೂಡ ಭವಿಷ್ಯ ನುಡಿದಿದ್ದರು.
ಡಿನೋಟಿಫಿಕೇಷನ್ ಹಗರಣದಿಂದಾಗಿ ಪರಪ್ಪನ ಅಗ್ರಹಾರದ ಕಂಬಿ ಎಣಿಸಿ ಬಂದ ಯಡಿಯೂರಪ್ಪ ಅವರ ಬಿಡುಗಡೆ ಈ ಎಲ್ಲ ಬದಲಾವಣೆಗಳಿಗೆ ಮುನ್ನುಡಿ ಬರೆಯಲಿದೆಯೆ? ಬೀಸಿರುವ ಚಳಿಗಾಳಿಯಿಂದಾಗಿಯೋ, ಯಡಿಯೂರಪ್ಪನವರ ಬಿಡುಗಡೆಯಿಂದಾಗಿಯೋ ಬಿಜೆಪಿಯಲ್ಲಿಯೇ ಅನೇಕ ನಾಯಕರು ಕಟಕಟನೆ ಹಲ್ಲುಕಡಿಯುತ್ತಿರುವುದು ಕೂಡ ಸ್ಪಷ್ಟ. ಈಶ್ವರಪ್ಪ ರಾಜ್ಯಾಧ್ಯಕ್ಷ ಸ್ಥಾನ ಬಿಟ್ಟುಕೊಡುತ್ತಾರಾ? ಅನಂತ್ ಬಣ ಯಡಿಯೂರಪ್ಪಗೆ ಮತ್ತೆ ಸಿಹಿ ತಿನ್ನಿಸುತ್ತದಾ?
ಯಡಿಯೂರಪ್ಪ ಮುಂದೇನು ಮಾಡಲಿದ್ದಾರೆ ಎಂಬುದು ಸದ್ಯಕ್ಕೆ ಊಹಿಸಲಾಗದ ಸಂಗತಿ. ಸದ್ಯಕ್ಕಂತೂ ಬಿಡುಗಡೆಯಾದ ಕೂಡಲೆ ಸುಮಾರು 200 ಬೆಂಗಾವಲು ವಾಹನಗಳೊಂದಿಗೆ ಹಲಸೂರಿನ ಸೋಮೇಶ್ವರನ ಆಶೀರ್ವಾದ ಪಡೆದಿದ್ದಾರೆ. ಜೈಲಿನಿಂದ ಹೊರಬಂದ ಕೂಡಲೆ, "ದೇವರ ಆಶೀರ್ವಾದದಿಂದ ಹೊರಬಂದಿದ್ದೇನೆ. ರಾಜ್ಯದ ಲಕ್ಷಾಂತರ ಜನರ ಪ್ರೀತಿ ವಿಶ್ವಾಸ ನನಗಿದೆ" ಎಂದಷ್ಟೇ ಹೇಳಿ ನಿರ್ಗಮಿಸಿದ್ದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇನ್ನು ಮೂರು ದಿನ (ನ.11) ಇರುವ ಸಂದರ್ಭದಲ್ಲಿ ಯಡಿಯೂರಪ್ಪನವರ ಬಿಡುಗಡೆಯಾಗಿರುವುದು ಚುನಾವಣೆಯ ಮೇಲೆಯೂ ಪರಿಣಾಮ ಬೀರಲಿದೆ ಎಂದು ರಾಜಕೀಯ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ. ಕೊಪ್ಪಳ ಉಪ ಚುನಾವಣೆಯನ್ನು ಗೆಲ್ಲಿಸಿಕೊಟ್ಟಿದ್ದ ಯಡಿಯೂರಪ್ಪ ಬಳ್ಳಾರಿ ಗ್ರಾಮೀಣ ಉಪ ಚುನಾವಣೆಯಲ್ಲಿಯೂ ಅದೇ ಜಾದೂ ಮಾಡಲಿದ್ದಾರೆಯೆ?
ಕೆಳಗಿಳಿಯಲು ಗೌಡ ಸಿದ್ಧ : ಇತ್ತ ಬೆಂಗಳೂರಿನಲ್ಲಿ ಯಡಿಯೂರಪ್ಪ ಮುಕ್ತ ಮುಕ್ತ ಮುಕ್ತರಾಗಿದ್ದರೆ, ಅತ್ತ ದೆಹಲಿಯಲ್ಲಿರುವ ಮುಖ್ಯಮಂತ್ರಿ ಸದಾನಂದ ಗೌಡ ಅವರು, "ವರಿಷ್ಠರು ಬಯಸಿದರೆ ಪದತ್ಯಾಗಕ್ಕೆ ಸಿದ್ಧ" ಎಂದು ಹೇಳಿ, ಹೈಕಮಾಂಡಿನ ಯಾವುದೇ ನಿರ್ಧಾರಕ್ಕೂ ಮುಕ್ತರಾಗಿರುವುದಾಗಿ ಹೇಳಿದ್ದಾರೆ. ರಾಜಕೀಯ ಒಳಸುಳಿಗಳನ್ನು ಬಲ್ಲವರಿಗೆ ಸದಾನಂದ ಗೌಡರ ಈ ಮಾತು ಅಚ್ಚರಿಯನ್ನೇನೂ ತಂದಿಲ್ಲ.












Click it and Unblock the Notifications