ಶ್ರೀರಾಮುಲು ನೀವು ಬಿಜೆಪಿಗೆ ರಾಜೀನಾಮೆ ನೀಡಿದ್ದಾದರೂ ಏಕೆ ?

ಬಳ್ಳಾರಿ ಗಣಿಧಣಿ ಜನಾರ್ಧನ ರೆಡ್ಡಿ ಬಂಧನದ ನಂತರ ಸಂಪೂರ್ಣ ಕರಗಿಹೋಗಿರುವ ರೆಡ್ಡಿಗಳ ಸಾಮ್ರಾಜ್ಯದಲ್ಲಿ ಇನ್ನು ತಮ್ಮ ರಾಜಕೀಯ ಬೇಳೆ ಬೇಯುವುದಿಲ್ಲ ಎಂದರಿತ ಶ್ರೀರಾಮುಲು ಮತ್ತೆ ಬಿಜೆಪಿ ಮಡಿಲಿಗೆ ಬಿದ್ದರೆ, ಬಿಜೆಪಿ ಒತ್ತಾಯಕ್ಕೆ ಮಣಿದರೆ ಅಥವಾ ಕಾರ್ಯಕರ್ತರ ಒತ್ತಡಕ್ಕೆ ಮಣಿದರೆ ಅದು ಬೇರೆ ವಿಚಾರ. ಒಂದು ವೇಳೆ ರೆಡ್ಡಿ ಜೈಲಿನಲ್ಲಿ ಇಲ್ಲದಿದ್ದರೆ ರಾಜ್ಯ, ಶ್ರೀರಾಮುಲು ಅವರ ಸಾರಥ್ಯದಲ್ಲಿ ಹೊಸ ಪ್ರಾದೇಶಿಕ ಪಕ್ಷ ನೋಡಬಹುದಿತ್ತೇನೋ? ರಾಮುಲು ಇನ್ನೂ ತಮ್ಮ ಅಂತಿಮ ನಿರ್ಧಾರ ಪ್ರಕಟಿಸದಿದ್ದರೂ ಮಂಗಳವಾರ ( ನ 8) ಜನಾರ್ಧನ ರೆಡ್ಡಿಯವರನ್ನು ಭೇಟಿ ಮಾಡಿ ಬೆಜೆಪಿ ಟಿಕೆಟ್ ನಲ್ಲಿ ಸ್ಪರ್ಧಿಸುವುದು ಗ್ಯಾರಂಟಿ ಎನ್ನುವುದು ಪಕ್ಷದ ಮೂಲಗಳ ಪ್ರಕಾರ ಬಂದಿರುವ ವರದಿ.
ಎಲ್ಲರಿಗೂ ತಿಳಿದಿರುವ ಹಾಗೆ ಶ್ರೀರಾಮುಲು ರಾಜೀನಾಮೆ ನೀಡಿದ್ದು ಖಂಡಿತ ಕ್ಷೇತ್ರದ ಕಡೆಗಣನೆಗಾಗಿ ಅಲ್ಲ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ರಾಮುಲು ರಾಜೀನಾಮೆ ನೀಡಿದ್ದು, ರೆಡ್ಡಿ ಸಾಮ್ರಾಜ್ಯದ ಮೇಲಿನ ನಿಷ್ಥೆ , ಪ್ರಾಮಾಣಿಕತೆ. ಅಲ್ಲದೆ ರಾಮುಲು ರೂಪದಲ್ಲಿ ರೆಡ್ಡಿ ಪಡೆ ಬಿಜೆಪಿಗೆ ಸಡ್ಡು ಹೊಡೆಯಲು ಉರುಳಿಸಿದ ದಾಳ. ಯಾವಾಗ ಸಿಬಿಐ ದಾಳದಿಂದ ರೆಡ್ಡಿ ಹೊರ ಬರಲು ಆಗುತ್ತಿಲ್ಲವೋ ಆವಾಗಲೇ ರಾಮುಲು ರಾಜೀನಾಮೆ ಎನ್ನೋ ಪ್ರಸಂಗ ನೀರಿಗೆ ಬಿದ್ದ ಪಟಾಕಿ.
ಒಂದು ಕ್ಷೇತ್ರದ ಮರುಚುನಾವಣೆಗೆ ತಗಲುವ ವೆಚ್ಚ ಹೆಚ್ಚುಕಮ್ಮಿ ಕೋಟಿ ಲೆಕ್ಕದಲ್ಲಿ. ಕೇಸರಿ ಪಕ್ಷ ಅಧಿಕಾರಕ್ಕೆ ಬಂದ ನಂತರ ಇಂತಹ ಬಹಳಷ್ಟು ಮರು ಚುನಾವಣೆಗಳನ್ನು ರಾಜ್ಯದ ಜನತೆ ಕಾಣುವ ಹಾಗೆ ಮಾಡಿದೆ. ಒಂದು ಕಡೆ ಪೆಟ್ರೋಲ್ ಸೆಸ್ ಇಳಿಸಲು ನಿರಾಕರಿಸುತ್ತಿರುವ ದೇಶದ ಶಿಸ್ತಿನ ಪಕ್ಷದ ಸರಕಾರ, ಆಪರೇಷನ್ ಕಮಲದಂತಹ ಅಶಿಸ್ತಿನ ಹೆಜ್ಜೆ ಇಟ್ಟು ಚುನಾವಣೆ ನಡಿಸಿ ಕೋಟಿ ಕೋಟಿ ಸಾರ್ವಜನಿಕರ ಜೇಬಿಗೆ ಬತ್ತಿ ಇಟ್ಟಿದ್ದು ಇನ್ನೊಂದು ಕಡೆ.
ತಮ್ಮ ಸ್ವಹಿತಕ್ಕಾಗಿ ರಾಜೀನಾಮೆ ಸಲ್ಲಿಸಿ ನಂತರ ಕ್ಷೇತ್ರ ಅಭಿವೃದ್ದಿಗೆ ಅನುದಾನ ಸಿಗುತ್ತಿಲ್ಲ ಎನ್ನುವುದು ಜ್ಯಾತ್ಯಾತೀತವಾಗಿ ಎಲ್ಲಾ ಪಕ್ಷಗಳು ರಾಜೀನಾಮೆಗೆ ನೀಡುವ ಕಾರಣ. ಒಂದು ವಿಧಾನಸಭಾ ಕ್ಷೇತ್ರದ ಮರು ಚುನಾವಣೆಗೆ (ಅದು ಆಪರೇಷನ್ ಕಮಲ ಇರಬಹುದು ಅಥವಾ ಶ್ರೀರಾಮುಲು ಪ್ರಸಂಗ ಇರಬಹುದು) ತಗಲುವ ಖರ್ಚು ವೆಚ್ಚಗಳನ್ನು ಪ್ರಮುಖ ಪಕ್ಷಗಳೇ ಭರಿಸ ಬೇಕೆಂದು ಚುನಾವಣಾ ಆಯೋಗ ಫರ್ಮಾನು ಹೊರಡಿಸಿದರೆ ಬಹುಷಃ ಇಂತಹ ಮರು ಚುನಾವಣೆಗಳಿಗೆ ಬ್ರೇಕ್ ಹಾಕ ಬಹುದೇನೋ? ಅಥವಾ ಆ ಖಚುಗಳೆಲ್ಲಾ ನಮಗೆ ಜುಜುಬಿ ಎಂದು ರಾಜಕೀಯ ಪಕ್ಷಗಳು ಕ್ಯಾರೇ ಮಾಡದಿರಬಹುದು.












Click it and Unblock the Notifications