ಬೆಂಗಳೂರು ಮೈಸೂರು ಕಿಂಗ್ಫಿಶರ್ ಹಾರಾಟ ರದ್ದು

ಈಗಾಗಲೇ ವಿಮಾನ ಸಂಚಾರವನ್ನು ಸ್ಥಗಿತಗೊಳಿಸುವ ಕುರಿತಂತೆ ಕಿಂಗ್ಫಿಶರ್ ವಿಮಾನಯಾನ ಸಂಸ್ಥೆ ಮಾಹಿತಿ ನೀಡಿದೆ ಎನ್ನಲಾಗಿದ್ದು, ವಿಮಾನ ಸಂಚಾರ ಸ್ಥಗಿತಕ್ಕೆ ಕಾರಣ ಏನು ಎಂಬುವುದು ತಿಳಿದುಬಂದಿಲ್ಲ. ಈ ಬಗ್ಗೆ ಸಂಸ್ಥೆ ಇನ್ನಷ್ಟೆ ಮಾಹಿತಿಯನ್ನು ನೀಡಬೇಕಿದೆ.
ಒಂದು ಮೂಲದ ಪ್ರಕಾರ ಕಿಂಗ್ಫಿಶರ್ ವಿಮಾನ ಸಂಸ್ಥೆಗೆ ಇತರೆಡೆಗೆ ಸಂಚಾರ ನಡೆಸಲು ವಿಮಾನಗಳ ಕೊರತೆ ಕಂಡು ಬಂದಿದ್ದರಿಂದ ಮೈಸೂರಿನ ಸಂಚಾರವನ್ನು ಸದ್ಯದ ಮಟ್ಟಿಗೆ ರದ್ದುಗೊಳಿಸಿ ಬಳಿಕ ನವೆಂಬರ್ 18ರಿಂದ ಮತ್ತೆ ಸಂಚಾರವನ್ನು ಆರಂಭಿಸುವ ಬಗ್ಗೆ ಹೇಳಲಾಗುತ್ತಿದೆಯಾದರೂ ಅದನ್ನು ನಂಬಲು ಸಾಧ್ಯವಿಲ್ಲ. ಹಾಗಾಗಿ ವಿಮಾನ ಸಂಚಾರವನ್ನು ಶಾಶ್ವತವಾಗಿ ಸ್ಥಗಿತಗೊಳಿಸಿದರೂ ಅಚ್ಚರಿಯಿಲ್ಲ.
2010ರಲ್ಲಿ ದಸರಾ ಸಂದರ್ಭ ಮೈಸೂರಿಗೆ ವಿಮಾನ ಹಾರಾಟವನ್ನು ಆರಂಭಿಸಲಾಗಿತ್ತು. ಪ್ರತಿ ದಿನ ಕಿಂಗ್ಫಿಶರ್ ವಿಮಾನಯಾನ ಸಂಸ್ಥೆಗೆ ಸೇರಿದ ಎಟಿಆರ್-72 ವಿಮಾನ ಮಧ್ಯಾಹ್ನ 12.45ಕ್ಕೆ ಮೈಸೂರಿಗೆ ಆಗಮಿಸಿ ಬಳಿಕ 1.15ಕ್ಕೆ ಹಿಂತಿರುಗುತ್ತಿತ್ತು. ಈ ವಿಮಾನಕ್ಕೆ ಶೇ.70ರಷ್ಟು ಮಾತ್ರ ಪ್ರಯಾಣಿಕರಿದ್ದರು ಎನ್ನಲಾಗುತ್ತಿದೆ. ಇನ್ನು ಕಿಂಗ್ಫಿಶರ್ ವಿಮಾನಯಾನ ಸಂಸ್ಥೆಯ ವಿಮಾನ ಹೊರತುಪಡಿಸಿ ಬೇರೆ ಯಾವುದೇ ವಿಮಾನಯಾನ ಸಂಸ್ಥೆಗಳು ವಿಮಾನ ಸಂಚಾರವನ್ನು ಆರಂಭಿಸಲು ಮುಂದೆ ಬಂದಿಲ್ಲ. ಇದಕ್ಕೆ ಸರ್ಕಾರ ಸಕರಾತ್ಮಕವಾಗಿ ಉತ್ತೇಜನ ನೀಡದಿರುವುದೇ ಕಾರಣ ಎಂದರೂ ತಪ್ಪಾಗುವುದಿಲ್ಲ.
ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದ ನಿರ್ಮಾಣದ ಹಂತದಿಂದಲೇ ಹಲವು ವಿಘ್ನಗಳನ್ನು ಕಂಡಿತ್ತಾದರೂ ಎಲ್ಲ ಎಡರು ತೊಡರುಗಳನ್ನು ದಾಟಿ ವಿಮಾನ ನಿಲ್ದಾಣ ನಿರ್ಮಾಣವಾಗಿ ವಿಮಾನ ಹಾರಾಡಲು ಆರಂಭಿಸಿದಾಗ ಜನ ಹಲವು ಕನಸುಗಳನ್ನು ಕಂಡಿದ್ದರು. ಆ ಕನಸುಗಳಲ್ಲಿ ಅನೇಕವು ನನಸಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ.












Click it and Unblock the Notifications