ಸಿವಿ ನಾಗೇಶ್ ದಟ್ಸ್ ಕನ್ನಡಕ್ಕೆ ನೀಡಿದ ಸಂದರ್ಶನ ನಿರೀಕ್ಷಿಸಿ

ಅವರ ಮಾತಿನಲ್ಲಿ ಹೆಚ್ಚು ಬೇಸರ, ತುಸು ಆಶ್ಚರ್ಯ ವ್ಯಕ್ತವಾಗಿದ್ದು ಸ್ಪಷ್ಟವಾಗಿತ್ತು. ಏಕೆಂದರೆ ಜೈಲು ಸೇರಿಕೊಂಡಿರುವ ಈ ಅತಿರಥ ಮಹಾರಥರ ಪೈಕಿ ಅನೇಕ ಮಂದಿಯ ಪರವಾಗಿ ಅವರು ವಿಭಿನ್ನ ಕೋರ್ಟುಗಳಲ್ಲಿ ವಕಾಲತ್ತು ವಹಿಸಿದ್ದಾರೆ.
ಸೋ, ಒಂದಕ್ಕಿಂತ ಒಂದು ಭಿನ್ನವಾದ ಈ ಕೋರ್ಟುಗಳು ಒಟ್ಟಿಗೇ ಮಾತನಾಡಿಕೊಂಡಂತೆ 'ಯಾವುದೇ ಖ್ಯಾತನಾಮ ಕಟಕಟೆಗೆ ಬಂದು ನಿಂತರೆ ಅವರನ್ನು ಹಿಂದುಮುಂದು ನೋಡದೆ ಅವರನ್ನು ಜೈಲಿಗಟ್ಟುವ ಅಪೂರ್ವ ತೀರ್ಮಾನಕ್ಕೆ ಬದ್ಧವಾಗಿರುವಂತೆ ಗೋಚರಿಸುತ್ತಿರುವಾಗ' ಸಿವಿ ನಾಗೇಶ್ ಅವರಿಗೆ ನ್ಯಾಯ ಸಮ್ಮತವಾಗಿಯೇ ಇದರಿಂದ ಬೇಜಾರಾಗಿತ್ತು.
'ಅಲ್ರೀ, ಮತ್ತಿನ್ನೇನು? ಎಂತೆಂಥಾ ಕೊಲೆಗಡುಕರು, ಅತ್ಯಾಚಾರಿಗಳು, ಪರಮ ಪಾತಕಿಗಳಿಗೆ ಕ್ಷಣಾರ್ಧದಲ್ಲಿ ಬೇಲ್ ಕೊಡಿಸುವ ಪರಿಪಾಠ ಬೆಳೆಸಿಕೊಂಡಿರುವಾಗ ಇದೇನಿದು, ಕೋರ್ಟುಗಳು ಖ್ಯಾತನಾಮರ ಮೇಲೆ ಹೀಗೆ ಮುರುಕೊಂಡು ಬಿದ್ದಿವೆ. ಅಲ್ರೀ ಖಾಸಗಿ ದೂರನ್ನು ಆಧರಿಸಿ, ಆರೋಪಿಯನ್ನು ಜೈಲಿಗಟ್ಟಿರುವುದು ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ನಡೆದಿದೆ ಅಂದರೆ ನಂಬೋಕೂ ಆಗ್ತಿಲ್ಲ? ಎಂದು ಕಿಡಿಕಾರಿದರು.
'ಇವು ಯಾವುವೂ ಘನಂಧಾರಿ ಪ್ರಕರಣಗಳೇ ಅಲ್ಲ ಕೇಳಿ. ಎಲ್ಲಾ ಪೆಟ್ಟಿ ಕೇಸುಗಳು. ಅಸಲಿಗೆ ಅವರುಗಳ ವಿರುದ್ಧ ದಾಖಲಾಗಿರುವ ಪ್ರಕರಣಗಳು ಯಾವುವೂ ನಾನ್ ಬೇಲಬಲ್ ಅಲ್ಲವೇ ಅಲ್ಲ' ಎಂದು ಹಾಸ್ಯದ ಧಾಟಿಯಲ್ಲೇ ಗರಂ ಆಗಿ ಪ್ರತಿಕ್ರಿಯುಸುತ್ತಾ ಸಾಗಿದರು ನಾಗೇಶ್.
ಇದೇನಿದು ತಮ್ಮ ಕಕ್ಷಿದಾರರನ್ನು ರಕ್ಷಿಸಿಕೊಳ್ಳುವ ಧಾವಂತದಲ್ಲಿ ನಾಗೇಶ್ ನ್ಯಾಯಕ್ಕೇ ಎಳ್ಳು ನೀರು ಬಿಡುತ್ತಿದ್ದಾರೆ ಅನಿಸಿದ್ದು ನಿಜ. ಅಂದಹಾಗೆ ಇವರು ಜನಾರ್ದನ ರೆಡ್ಡಿ, ಕಟ್ಟಾ ಸುಬ್ರಮಣ್ಯ, 2ಜಿ ಹಗರಣ ಮುಂತಾದ ಕೇಸುಗಳನ್ನು ಕೈಗೆತ್ತಿಕೊಂಡಿದ್ದಾರೆ.
ಆದರೆ ವಿಷಯ ಅದಲ್ಲ. ನಾಗೇಶ್ ಅವರು ಹೇಳಿದಂತೆ ಯಾವ ಕೋರ್ಟುಗಳು ಪ್ಲೇಯಿಂಗ್ ಟು ದಿ ಗ್ಯಾಲರಿ ಆಗಿವೆಯೋ ಅವುಗಳ ನ್ಯಾಯಸಮ್ಮತ ಆದೇಶಗಳಿಗೆ ಮರ್ಮಾಘಾತವಾಗುವಂತೆ ಘನ ನ್ಯಾಯಾಲಯವೊಂದು ನಿನ್ನೆ ಖ್ಯಾತನಾಮರಿಗೆ ಜಾಮೀನು ದಯಪಾಲಿಸಿ ಬಿಟ್ಟಿದೆ. ಅಷ್ಟೇ ಅಲ್ಲ ಈ ಹಿಂದೆ ಜಾಮೀನು ನೀಡದ ನ್ಯಾಯಾಲಯಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪ್ರಸಂಗವೂ ನಡೆದಿದೆ.
ಅಲ್ಲಿಗೆ ಯಾವ ಕೋರ್ಟುಗಳು ಪ್ಲೇಯಿಂಗ್ ಟು ದಿ ಗ್ಯಾಲರಿ ಎಂದು ತೀರ್ಪುಗಳು ನೀಡುತ್ತಿದ್ದವೋ ಅವುಗಳನ್ನು ರೆಕ್ಟಿಫೈ ಮಾಡಲು ಹೊರಟಿದೆಯೇ ರಾಜ್ಯ ಉಚ್ಛ ನ್ಯಾಯಾಲಯ!? ಮುಂದೆ ಚರ್ಚಿಸೋಣ ...












Click it and Unblock the Notifications