ಭ್ರಷ್ಟರ ಜೊತೆ ರಾಜಿ ಇಲ್ಲ : ಬೆಂಗಳೂರಲ್ಲಿ ಅಡ್ವಾಣಿ

ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಮಳೆಯನ್ನೂ ಲೆಕ್ಕಿಸದೆ ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ, ಬೆರಳೆಣಿಕೆಯ ನಾಯಕರ ಉಪಸ್ಥಿತಿಯಲ್ಲಿ ಭಾಷಣ ಮಾಡಿದ ಅಡ್ವಾಣಿ, ಭ್ರಷ್ಟಾಚಾರದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಭ್ರಷ್ಟಚಾರದಿಂದ ಉತ್ತಮ ಆಡಳಿತ ನೀಡಲು ಸಾಧ್ಯವಿಲ್ಲ. ಭ್ರಷ್ಟಾಚಾರವನ್ನು ಯಾವುದೇ ರೀತಿ ಸಹಿಸುವುದಿಲ್ಲ ಎಂದು ಗುಡುಗಿದರು, ಮಾತಿನ ಮಳೆಯನ್ನು ಸುರಿಸಿದರು.
ಸದಾನಂದ ಗೌಡ ಭ್ರಷ್ಟಾಚಾರ ಮುಕ್ತವಾಗಿರುವ, ಸ್ವಚ್ಛ ಆಡಳಿತ ನೀಡುವ ಭರವಸೆ ನೀಡಿದ್ದಾರೆ. ಅವರ ಅಡಿಯಲ್ಲಿ ಸರಕಾರ ಪೂರ್ತಿ ಅವಧಿಯನ್ನು ಪೂರೈಸಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಜೈಲಲ್ಲಿರುವ ನಾಯಕರ ಬಗ್ಗೆ ಪ್ರಸ್ತಾಪಿಸಿದ ಅಡ್ವಾಣಿ, ಆರೋಪಿಗಳ ಮೇಲೆ ಹೊರಿಸಲಾಗಿರುವ ಆರೋಪವನ್ನು ಸಾಬೀತುಮಾಡಿದಾಗಲೇ ಅವರನ್ನು ಅಪರಾಧಿಗಳೆಂದು ಪರಿಗಣಿಸಲು ಸಾಧ್ಯ ಎಂದರು.
ಯಡಿಯೂರಪ್ಪ ನಿಷ್ಠರ ಗೈರು : ಯಡಿಯೂರಪ್ಪ ಜೈಲು ಸೇರಿರುವುದರಿಂದ ಅವರ ನಿಷ್ಠರಾದ ಅನೇಕ ಸಚಿವರ ಗೈರು ಸಭೆಯಲ್ಲಿ ಎದ್ದು ಕಾಣುತ್ತಿತ್ತು. ಶೋಭಾ ಕರಂದ್ಲಾಜೆ, ಮುರುಗೇಶ್ ನಿರಾಣಿ, ವಿ ಸೋಮಣ್ಣ, ರೇಣುಕಾಚಾರ್ಯ, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ ಸವದಿ, ರೇವೂನಾಯಕ್ ಬೆಳಮಗಿ, ಉಮೇಶ್ ಕತ್ತಿ, ಸಿಸಿ ಪಾಟೀಲ್ ಮತ್ತು ರೆಡ್ಡಿ ಬ್ರದರ್ಸ್ ಉಪಸ್ಥಿತರಿಲ್ಲದಿದ್ದುದು ಬಿಜೆಪಿಯ ಮನಸ್ಥಿತಿಗೆ ಕನ್ನಡಿ ಹಿಡಿದಂತಿತ್ತು.
ಕನ್ನಡಿಗರ ಶ್ಲಾಘನೆ : ಭಾಷಣದ ಆರಂಭದಲ್ಲಿ ಬೆಂಗಳೂರಿನ ಜೈಲಿನಲ್ಲಿ ತಾವು ಕಳೆದ ಹಳೆಯ ದಿನಗಳನ್ನು ನೆನೆಸಿಕೊಂಡ ಅಡ್ವಾಣಿ, ಇನ್ನೂ ಹೆಚ್ಚು ದಿನ ಇಲ್ಲಿದ್ದಿದ್ದರೆ ಕನ್ನಡ ಇನ್ನೂ ಹೆಚ್ಚು ಕಲಿಯುತ್ತಿದ್ದೆ ಎಂದರು. ಮಳೆ ಸುರಿಯುತ್ತಿದ್ದರೂ ತಮ್ಮ ಮಾತನ್ನು ಕೇಳಲು ನೆರೆದ ಜನರ ಪ್ರೀತಿ ಎಲ್ಲಕ್ಕಿಂತ ದೊಡ್ಡದು ಎಂದು ಹರ್ಷ ವ್ಯಕ್ತಪಡಿಸಿದರು. ಕನ್ನಡ ಜನರ ಅಭಿಮಾನಕ್ಕೆ ನಾನು ಎಂದಿಗೂ ಋಣಿ ಎಂದು ಅಡ್ವಾಣಿ ನುಡಿದರು.
ಮಳೆ ಬಂದಿದ್ದರಿಂದ ಕುರ್ಚಿಯಲ್ಲಿ ಕೂಡುವ ಬದಲು ಅದನ್ನೇ ಛತ್ರಿಯನ್ನಾಗಿ ಹಿಡಿದು ಜನರು ಅಡ್ವಾಣಿ ಭಾಷಣ ಕೇಳಿದರು. ಇದರಿಂದಾಗಿ ಗೊಂದಲದ ವಾತಾರವಣ ಸೃಷ್ಟಿಯಾಗಿತ್ತು. ಗೊಂದಲ, ಗಲಿಬಿಲಿಯ ನಡುವೆ ಕೆಲ ಮಕ್ಕಳು ಪಾಲಕರ ಕೈತಪ್ಪಿಸಿಕೊಂಡ ವರದಿ ಕೂಡ ಬಂದಿದೆ. ವೇದಿಕೆಯ ಮೇಲೆ ಅಡ್ವಾಣಿ ಜೊತೆ ಸದಾನಂದ ಗೌಡ, ವೆಂಕಯ್ಯ ನಾಯ್ಡು, ಅನಂತ್ ಕುಮಾರ್, ಅರವಿಂದ ಲಿಂಬಾವಳಿ, ಪ್ರಹ್ಲಾದ್ ಜೋಶಿ ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications