ಬಿಜೆಪಿಗೆ ಬಿಸಿತುಪ್ಪವಾಗಿರುವ ಅಶೋಕ್ ತಲೆದಂಡ?

ಈ ಎಲ್ಲ ಉತ್ತರಗಳಿಲ್ಲದ ಪ್ರಶ್ನೆಗಳು ಕರ್ನಾಟಕ ಬಿಜೆಪಿಗೆ ಭಾರೀ ತಲೆನೋವು ತಂದಿರುವುದಂತು ಸ್ಪಷ್ಟ. ಒಂದಾದ ಮೇಲೊಂದರಂತೆ ದಾಖಲಾಗುತ್ತಿರುವ ಕ್ರಿಮಿನಲ್ ಕೇಸುಗಳು ಬಿಜೆಪಿಯ ವರ್ಚಸ್ಸನ್ನು ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿಯೂ ಮುಕ್ಕಾಗಿಸಿರುವುದು ಬಿಜೆಪಿ ನಾಯಕರನ್ನು ತಲೆಯೆತ್ತಿ ತಿರುಗಲಾಗದಂತೆ ಮಾಡಿದೆ.
ಈ ಪ್ರಶ್ನೆಗಳಿಗೆಲ್ಲ ಉತ್ತರ ಕಂಡುಕೊಳ್ಳಲು ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರ ನೇತೃತ್ವದಲ್ಲಿ ಚಾಮರಾಜಪೇಟೆಯಲ್ಲಿರುವ ಕೇಶವಕೃಪಾದಲ್ಲಿ ಆರ್ಎಸ್ಎಸ್ ನಾಯಕರ ಸಮ್ಮುಖದಲ್ಲಿ ಬಿಜೆಪಿ ನಾಯಕರು ಸಭೆ ಸೇರಿದ್ದರು. ಬಿಜೆಪಿ ಮುಖಂಡರಾದ ಸಂತೋಷ್, ಸತೀಶ್ ಉಪಸ್ಥಿತಿಯಲ್ಲಿ ಈ ಸಭೆ ನಡೆಯಿತು. ಸಭೆಯ ನಂತರ ಪತ್ರಕರ್ತರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಈಶ್ವರಪ್ಪ ಹೊರನಡೆದಿದ್ದು ಮತ್ತಷ್ಟು ಪ್ರಶ್ನೆಗಳೇಳುವಂತೆ ಮಾಡಿದೆ.
ಗೃಹ ಸಚಿವರೂ ಆಗಿರುವ ಸಾರಿಗೆ ಸಚಿವ ಆರ್ ಅಶೋಕ್ ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವುದು ಬಿಜೆಪಿಯನ್ನು ಭಾರೀ ಸಂದಿಗ್ಧತೆಗೆ ಸಿಲುಕಿಸಿದೆ. ಕಾಂಗ್ರೆಸ್ ನಾಯಕರು ಅಶೋಕ್ ರಾಜೀನಾಮೆ ನೀಡಲೇಬೇಕೆಂದು ಪಟ್ಟುಹಿಡಿದು ಕುಳಿತಿದ್ದಾರೆ. ಅಶೋಕ್ ಪ್ರಕರಣವಂತೂ ಬಿಜೆಪಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಬಿಎಸ್ವೈ ಕುಮಾರ್ ಮತ್ತೆ ಮೈತ್ರಿ? : ಎಲ್ಲಕ್ಕಿಂತ ಹೆಚ್ಚಾಗಿ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಇನ್ನೊಬ್ಬ ಮಾಜಿ ಮುಖ್ಯಮಂತ್ರಿ ಮತ್ತು ಮಾಜಿ ಬದ್ಧವೈರಿ ಎಚ್ ಡಿ ಕುಮಾರಸ್ವಾಮಿ ಸತತವಾಗಿ ಸಂಪರ್ಕಿಸುತ್ತಿರುವುದು ಅನೇಕ ಊಹಾಪೋಹಗಳಿಗೆ ಮತ್ತು ಸಂಶಯಗಳಿಗೆ ನಾಂದಿ ಹಾಡಿದೆ. ಈ ಮೊದಲು ಸಮಯ ಸಿಕ್ಕಾಗಲೆಲ್ಲ ಹೀಯಾಳಿಸುತ್ತಿದ್ದ ಕುಮಾರ್ ಅವರು ಯಡಿಯೂರಪ್ಪ ಜೈಲು ಸೇರಿದಾಗಿನಿಂದ ಅವರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ.
ಶನಿವಾರ, ಅ.22ರಂದು ಕೂಡ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಯಡಿಯೂರಪ್ಪನವರನ್ನು ಭೇಟಿಯಾಗಲು ಕುಮಾರಸ್ವಾಮಿ ಯತ್ನಿಸಿದ್ದಾರೆ. ಆದರೆ, ಭೇಟಿಯಾಗಲು ಸಾಧ್ಯವಾಗಿಲ್ಲ ಎಂದು ತಿಳಿದುಬಂದಿದೆ. ಇವರಿಬ್ಬರು ಮತ್ತೊಮ್ಮೆ ಕೈಜೋಡಿಸಿದರೆ ಏನು ಕಥೆ ಎಂಬ ದಿಗಿಲು ಕೂಡ ಬಿಜೆಪಿ ನಾಯಕರುಗಳಲ್ಲಿ ಮನೆಮಾಡಿದೆ.












Click it and Unblock the Notifications