ಅಡ್ವಾಣಿ ಮಹತ್ವಾಕಾಂಕ್ಷಿ ರಥಯಾತ್ರೆಗೆ ಇಂದು ಚಾಲನೆ

ಯುಪಿಎ ಕೂಟದಿಂದಾಗಿ ಉತ್ತಮ ಹಾಗೂ ಪಾರದರ್ಶಕ ಆಡಳಿತದ ಕೊರತೆ ತಾಂಡವವಾಡುತ್ತಿದ್ದು, ಜನ ಇದರಿಂದ ಬೇಸತ್ತಿದ್ದಾರೆ. ಹಾಗಾಗಿ ಯಾತ್ರೆಯಲ್ಲಿ ಈ ಅಂಶವನ್ನೂ ಚರ್ಚೆಗೆ ತೆಗೆದುಕೊಳ್ಳಲಾಗುತ್ತದೆ. ಯುಪಿಎ ಸರ್ಕಾರದ ಆಡಳಿತ ವೈಖರಿ ಹಾಗೂ ರಾಜಕೀಯದಲ್ಲಿ ನೈತಿಕತೆ ಕುಸಿದಿದೆ ಎಂದು ಅಡ್ವಾಣಿ ಯುಪಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ ಹಾಗೂ ಕಪ್ಪುಹಣದ ಬಗ್ಗೆ ನಾಗರಿಕ ಸಮಾಜ ಅರಿವು ಮೂಡಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವದ ಆರೋಗ್ಯವು ರಾಜಕೀಯ ಪಕ್ಷಗಳನ್ನು ಅವಲಂಬಿಸಿರುತ್ತದೆ ಎಂದರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ಕುರಿತು ಸಕಾಲದಲ್ಲಿ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಅಡ್ವಾಣಿ ಹೇಳಿದ್ದಾರೆ. ಚುನಾವಣೆ ಬಂದಾಗ ಈ ಕುರಿತು ಆಲೋಚಿಸಲಾಗುತ್ತದೆ. ಆದರೆ ಈಗ ಈ ವಿಷಯ ಚರ್ಚಿಸುವುದು ಸೂಕ್ತವಲ್ಲ. ಚುನಾವಣೆಗೆ ಇನ್ನೂ ಮೂರು ವರ್ಷಗಳು ಇವೆ. ಆದರೆ ಸರ್ಕಾರದ ಈಗಿನ ಕಾರ್ಯವೈಖರಿ ನೋಡಿದರೆ ಚುನಾವಣೆ ಯಾವಾಗ ಬೇಕಾದರೂ ಸಂಭವಿಸಬಹುದು ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಯಲ್ಲಿ ಪ್ರಧಾನಿ ಅಭ್ಯರ್ಥಿಗಳಿಗೆ ಕೊರತೆ ಇಲ್ಲ, ಕಾಲ ಸನ್ನಿಹಿತವಾದಾಗ ಪಕ್ಷ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು. ಪ್ರಧಾನಿ ಹುದ್ದೆಗೂ ತಮ್ಮ ಯಾತ್ರೆಗೂ ಸಂಬಂಧ ಕಲ್ಪಿಸಿರುವ ಬಗ್ಗೆ ಕೇಳಿದ ಪ್ರಶ್ನೆಗೆ, 'ನಾನು ಆರ್ಎಸ್ಎಸ್, ಜನಸಂಘ, ಬಿಜೆಪಿ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ದೇಶದಿಂದ ಉಪಕೃತನಾಗಿದ್ದೇನೆ. ಇದು ಪ್ರಧಾನಿ ಪಟ್ಟಕ್ಕಿಂತ ಮಿಗಿಲಾದದ್ದು' ಎಂದು ಪುನರುಚ್ಚರಿಸಿದರು.












Click it and Unblock the Notifications