ಶಾಂತಿಭೂಷಣರ 'ರಿಪಬ್ಲಿಕ್ ಆಫ್ ಬಳ್ಳಾರಿ' ವಾದ ರೆಡ್ಡಿಗೆ ಮುಳುವಾಯಿತು

ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಅವರು ಹಿರೇಮಠರ ಸಾಮಾಜಿಕ ಪರಿವರ್ತನಾ ಸಮಿತಿಯ ಪರ ತಮ್ಮ ವಾದವನ್ನು ಮಂಡಿಸಿದ್ದಾರೆ. ವಾದ-ಪ್ರತಿವಾದದ ಒಂದು ಹಂತದಲ್ಲಿ ಪ್ರಶಾಂತ್ ರ ಕೈಹಿಡಿದಿದ್ದೇ ನ್ಯಾ. ಹೆಗ್ಡೆ ಅವರ ಅಕ್ರಮ ಗಣಿಗಾರಿಕೆ ವರದಿ.
ಹೇಳಿ ಕೇಳಿ ಪ್ರಶಾಂತ್, ಅವರಪ್ಪ ಶಾಂತಿಭೂಷಣ್ ಮತ್ತು ಸಂತೋಷ್ ಹೆಗ್ಡೆ ಸುಪ್ರೀಂಕೋರ್ಟಿನ ಹಿರಿಯ ನ್ಯಾಯವಾದಿಗಳು. ಇವರ ಗೆಳೆತನ ಗಾಢವಾಗಿಯೇ ಇದೆ. ಇತ್ತೀಚೆಗೆ ಜನ ಲೋಕಪಾಲ ಮಸೂದೆ ಸಂಬಂಧ ನಾಗರಿಕ ಸಲಹಾ ಸಮಿತಿಯಲ್ಲಿ ಈ ತ್ರಿಮೂರ್ತಿಗಳು ತಮ್ಮ ಗೆಳೆತನವನ್ನು ನವೀಕರಿಸಿಕೊಂಡಿದ್ದರು ಎಂಬುದು ಗಮನಾರ್ಹ.
ಕರ್ನಾಟಕದ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ವರದಿಯಲ್ಲಿ 'ರಿಪಬ್ಲಿಕ್ ಆಫ್ ಬಳ್ಳಾರಿ' ಎಂಬ ಪ್ರತ್ಯೇಕ ಅಧ್ಯಾಯವೇ (ಛಾಪ್ಟರ್ 28) ಇದೆ. ಅದರಲ್ಲಿದೆ ರೆಡ್ಡಿಯ ಅಕ್ರಮ ಗಣಿಗಾರಿಕೆಯ ಆಳ-ಅಗಲಗಳ ಒಳಕೋವೆಗಳು.
ಸರಕಾರಿ ವಕೀಲ ರಾಜು ರಾಮಚಂದ್ರನ್ ಇನ್ನೇನು ಪ್ರಶಾಂತ್ ಗೆ ಮಣ್ಣುಮುಕ್ಕಿಸಿದೆ ಎಂಬ ಸಂತಸದಲ್ಲಿದ್ದಾಗ, ಪ್ರಶಾಂತ್ ಛಕ್ಕಂತ ಛಾಪ್ಟರ್ 28 ತೆರೆದವರೆ 'ಮೈಲಾರ್ಡ್! ಇಲ್ಲಿದೆ. ರೆಡ್ಡಿ ತನ್ನ ಜಿಲ್ಲೆಯಲ್ಲಿ ನಡೆಸಿರುವ ಗಣಿ ಅಕ್ರಮಗಳ ವೃತ್ತಾಂತ. ದಯವಿಟ್ಟು ಪರಾಮರ್ಶಿಸಿ' ಎನ್ನುತ್ತಿದ್ದಂತೆ ರಾಮಚಂದ್ರನ್ ರ ಜಂಘಾಬಲವೇ ಉಡುಗಿ ಹೋಗಿದೆ.
ಇನ್ನು, ಜೈನ್ ಎಂಬ ಮತ್ತೊಬ್ಬ ಅಕ್ರಮ ಗಣಿ ಪಾಖಂಡಿಯ ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ವಿರುದ್ಧವೂ ಈಗ ಸಿಬಿಐ ತನಿಖೆ ನಡೆಯಲಿದೆ. ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಈ ಸಿಂಡಿಕೇಟ್ ಕಂಪನಿ ಕಚೇರಿಯೊಂದಿದ್ದರೆ ಬಳ್ಳಾರಿಯಲ್ಲಿ ಕಾರ್ಪೊರೇಟ್ ಆಫೀಸ್ ಇದೆ.












Click it and Unblock the Notifications