ಬನ್ನೇರುಘಟ್ಟ: ನಕಲಿ ಫಾರೆಸ್ಟರ್ ಕಾಮುಕ ರೆಡ್ಡಿಯ ಬಂಧನ
ಆರೋಪಿ, ಆಂಧ್ರ ಮೂಲದ ಭರತ್ ಅಲಿಯಾಸ್ ಶಿವರಾಮ ರೆಡ್ಡಿ. ಖಾಕಿ ಪ್ಯಾಂಟ್, ಕೆಂಪು ಬೂಟು ಧರಿಸಿ ಅರಣ್ಯ ಇಲಾಖೆ ಸಿಬ್ಬಂದಿಯ ವೇಷದಲ್ಲಿ ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್, ಕಗ್ಗಲೀಪುರ ಮತ್ತಿತರ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದ ಆರೋಪಿಯು ಕದ್ದುಮುಚ್ಚಿ ತನ್ನ ಮೊಬೈಲ್ ಫೋನ್ನಲ್ಲಿ ಪ್ರೇಮಿಗಳ ಚೆಲ್ಲಾಟವನ್ನು ಚಿತ್ರಿಸಿಕೊಂಡು, ನಂತರ ಜೋಡಿಗಳ ಬಳಿಗೆ ಬಂದು ತಾನು ಫಾರೆಸ್ಟರ್ ಎಂದು ಅವರಿಂದ ಆಭರಣ, ಮೊಬೈಲ್ ತೆಗೆದಿರಿಸಿಕೊಂಡು ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದ ಎನ್ನಲಾಗಿದೆ.
ನಂತರ ಶಿವರಾಮ ರೆಡ್ಡಿ ಹುಡುಗಿಯರ ಮೊಬೈಲ್ ನಂಬರ್ ಪಡೆದು, ಅವರಿಗೆ ವಿಚಾರಣೆಗೆ ಒಂಟಿಯಾಗಿ ಬರಲು ತಿಳಿಸಿ, ಇಲ್ಲದಿದ್ದರೆ ನಿಮ್ಮ ತಂದೆ-ತಾಯಿಗೆ ತಿಳಿಸುವುದಾಗಿ ಬೆದರಿಕೆ ಹಾಕುತ್ತಿದ್ದ.ಒಂಟಿ ಹೆಣ್ಣು ಮಕ್ಕಳಿಂದ ಹಣ ವಸೂಲಿ ಮಾಡಿ ಕೆಲವೊಮ್ಮೆ ಕಾಮತೃಷೆಗೂ ಬಳಸಿಕೊಳ್ಳುತ್ತಿದ್ದ ವಿಕೃತಕಾಮಿ ಎನ್ನಲಾಗಿದೆ.
ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ನಕಲಿ ಫಾರೆಸ್ಟರ್ ಶಿವರಾಮ ರೆಡ್ಡಿಯ ಕಾಟ ತಾಳದೇ, ಸೋಮವಾರ ಬನ್ನೇರುಘಟ್ಟ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. 'ಆರೋಪಿ ಶಿವರಾಮ ರೆಡ್ಡಿ ಆ. 19ರಂದು ಬೆಂಗಳೂರಿಗೆ ಡ್ರಾಪ್ ನೀಡುವ ನೆಪದಲ್ಲಿ ತನ್ನ ಕಾರಿನಲ್ಲಿ ಕರೆದೊಯ್ದು, ಬನ್ನೇರುಘಟ್ಟ ಕಾಡಿನತ್ತ ತೆರಳಿ ಅಸಭ್ಯವಾಗಿ ವರ್ತಿಸಿದ.
ಆದರೆ ಅವನಿಂದ ತಪ್ಪಿಸಿಕೊಂಡೆ. ಭವಿಷ್ಯದ ದೃಷ್ಟಿಯಿಂದ ಯಾರಿಗೂ ವಿಷಯ ತಿಳಿಸದಿದ್ದರೂ ಸಹ ಪದೇ ಪದೆ ಮೊಬೈಲ್ಗೆ ಫೋನ್ ಮಾಡಿ ರೂ 8 ಸಾವಿರ ತರುವಂತೆ ಪೀಡಿಸುತ್ತಿದ್ದಾನೆ' ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಮಹಿಳೆಯ ದೂರನ್ನು ಅನುಸರಿಸಿ ಬನ್ನೇರುಘಟ್ಟ ಠಾಣೆಯ ಪಿಎಸ್ಐ ವಿಶ್ವನಾಥ್ ಹಾಗೂ ಸಿಬ್ಬಂದಿ ಕಾರ್ಯಪ್ರವೃತ್ತರಾಗಿ ಗೊಟ್ಟಿಗೆರೆಯಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ತಾನು ನಡೆಸಿದ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಅನೇಕ ಯುವತಿಯರು ಮಾನಮರ್ಯಾದೆಗೆ ಅಂಜಿ ದೂರನ್ನು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.