ಪಾಪು ಟೀಕೆಗೆ ಕಂಬಾರ ನಿಟ್ಟುಸಿರು, ನಿರುತ್ತರ

ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿರುವ ಹಿನ್ನೆಲೆಯಲ್ಲಿ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರು, 'ಯೋಗ್ಯತೆ ಇಲ್ಲದವರಿಗೆ ಜ್ಞಾನಪೀಠ ಪ್ರಶಸ್ತಿ ಬರುತ್ತಿದೆ, ಯೋಗ್ಯರು ಭಾಳಾ ಮಂದಿ ಅದಾರೆ ಎಂದು ಹೇಳಿದ್ದರು.
ಕನ್ನಡಕ್ಕೆ 7 ಜ್ಞಾನಪೀಠ ಬಂದಿದೆ, 8ನೇ ಬಂತು ಅಂತ ಖುಷಿ ಪಡುವುದರಲ್ಲಿ ಅರ್ಥವಿಲ್ಲ. ಕನ್ನಡ ಸಾಹಿತ್ಯಲೋಕದಲ್ಲಿ ಎಸ್ಎಲ್ ಭೈರಪ್ಪ ಅತ್ಯಂತ ಪ್ರಮುಖರು. ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದ್ದರೆ ಅದಕ್ಕೊಂದು ಬೆಲೆ ಬರುತ್ತಿತ್ತು ಎಂದು ಪಾಟೀಲ್ ಪುಟ್ಟಪ್ಪ ಅಭಿಪ್ರಾಯಪಟ್ಟಿದ್ದಾರೆ.
ಸಂಭ್ರಮದ ನಡುವೆ ಕಹಿ: 12 ವರ್ಷಗಳ ನಂತರ ಕನ್ನಡದ ಜಾನಪದ ಸೊಗಡಿನ ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಿರುವುದಕ್ಕೆ ಎಲ್ಲರೂ ಸಂತಸಪಡುತ್ತಿದ್ದಾರೆ. ಆದರೆ, ದೂರದ ಗಡಿಭಾಗದಲ್ಲಿ ಕುಳಿತ ಹಿರಿಯ ಸಾಹಿತಿಯೊಬ್ಬರು ಈ ರೀತಿ ಅಶುಭ ನುಡಿದಿರುವುದು ಕಂಬಾರರ ಅಭಿಮಾನಿಗಳಿಗೆ ದುಃಖ ತಂದಿದೆ.
ಲಾಬಿ ಮೂಲಕ ಜ್ಞಾನಪೀಠ ಪ್ರಶಸ್ತಿಯನ್ನು ಕಂಬಾರರು ಪಡೆದಿದ್ದಾರೆ ಎಂಬುರಲ್ಲಿ ಅರ್ಥವಿಲ್ಲ. ಎಸ್.ಎಲ್.ಭೈರಪ್ಪ ಅವರು ಪ್ರಶಸ್ತಿ ಹೆಚ್ಚು ಅರ್ಹರು ನಿಜ. ಆದರೆ, ಕಂಬಾರರಿಗೆ ಪ್ರಶಸ್ತಿ ಸಿಕ್ಕಿರುವುದಕ್ಕೆ ಸಂತಸ ಪಡುವುದನ್ನು ಕಲಿಯೋಣ, ಕೊರಗು ಯಾವಾಗಲೂ ಇದ್ದಿದ್ದೇ ಎಂದು ಹಿರಿಯ ಸಾಹಿತಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಪಾಪು ಟೀಕೆ ಇದೆ ಮೊದಲಲ್ಲ: ಯು.ಆರ್.ಅನಂತಮೂರ್ತಿ ಮತ್ತು ಗಿರೀಶ್ ಕಾರ್ನಾಡ್ ಅವರಿಗೂ ಜ್ಞಾನಪೀಠ ಪ್ರಶಸ್ತಿ ಲಭಿಸಿದಾಗಲೂ ಇಬ್ಬರೂ ಲಾಬಿ ಮಾಡಿ ಪ್ರಶಸ್ತಿ ಪಡೆದಿದ್ದಾರೆ ಎಂದು ಸಾಹಿತಿ ಪಾಪು ಬಹಿರಂಗವಾಗಿ ಟೀಕಿಸಿದ್ದರು.












Click it and Unblock the Notifications