ಲೋಕಾಯುಕ್ತಕ್ಕೆ ಶಿವರಾಜ್ ಪಾಟೀಲ್ ರಾಜೀನಾಮೆ
ಸೋಮವಾರ ಸಂಜೆ ರಾಜ್ಯಪಾಲ ಹಂಸರಾಜ್ ಭಾರಧ್ವಾಜ್ ಅವರನ್ನು ಸ್ವಯಂಪ್ರೇರಿತರಾಗಿ ಭೇಟಿ ಮಾಡಿದ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿಗಳು ರಾಜೀನಾಮೆ ಪತ್ರವನ್ನು ನೀಡಿ, ನೇಮಕ(ಜು.26)ವಾಗಿ ಎರಡೇ ತಿಂಗಳೊಳಗೆ ಪದತ್ಯಾಗ ಮಾಡಿದ್ದಾರೆ.
ವಸಂತ ನಗರದಲ್ಲಿ ನಿವೇಶನ ಹೊಂದಿದ್ದರೂ ಅಲ್ಲಾಳಸಂದ್ರದಲ್ಲಿರುವ ನ್ಯಾಯಾಂಗ ಇಲಾಖೆ ಗೃಹ ನಿರ್ಮಾಣ ಸಂಘದಿಂದ ಮತ್ತು ವೈಯಾಲಿಕಾವಲ್ ಗೃಹ ನಿರ್ಮಾಣ ಸಂಘದಿಂದ ಹೆಂಡತಿ ಅನ್ನಪೂರ್ಣಾ ಹೆಸರಿನಲ್ಲಿ ಕಾನೂನುಬಾಹಿರವಾಗಿ ನಿವೇಶನ ಹೊಂದಿರುವ ಆರೋಪ ಎದುರಿಸುತ್ತಿದ್ದಾರೆ.
ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ನಂತರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಾಟೀಲರು, ತಾವು ವಕೀಲನಾಗಿದ್ದಾಗ ಸೈಟನ್ನು ಖರೀದಿಸಿದ್ದು, ಅಲ್ಲಾಳಸಂದ್ರದಲ್ಲಿ ಸೈಟನ್ನು ಪಡೆದಿದ್ದು, ನಾಗವಾರ ಸೈಟನ್ನು ಹೆಂಡತಿ ಹೆಸರಿಗೆ ಕೊಂಡ ಘಟನಾವಳಿಗಳ ಸಂಪೂರ್ಣ ವಿವರ ನೀಡಿದರು. ತಾವು ಇಲ್ಲಿಯವರೆಗೆ ಅತ್ಯಂತ ಪ್ರಾಮಾಣಿಕರಾಗಿ ಕೆಲಸ ನಿರ್ವಹಿಸಿರುವುದಾಗಿ ನುಡಿದರು.
ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಅಣ್ಣಾ ಹಜಾರೆ ಅವರು ಶಿವರಾಜ ಪಾಟೀಲರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದರು. ಭ್ರಷ್ಟಾಚಾರ ಹಗರಣಗಳಲ್ಲಿ ಸಿಕ್ಕಿಕೊಂಡಿರುವ ಕೆಲ ರಾಜಕಾರಣಿಗಳಿಂದಲೂ ಅವರ ರಾಜೀನಾಮೆಗೆ ಒತ್ತಾಯ ಬಂದಿತ್ತು.