ಬೆಂಗಳೂರಿನ ಮೇಲೆ 24 ಗಂಟೆಯೂ ಕ್ಯಾಮೆರಾ ಕಣ್ಣು

ಇದಕ್ಕಾಗಿ 500 ಕೋಟಿ ರು. ವೆಚ್ಚದಲ್ಲಿ ನಗರದಾದ್ಯಂತ ಎಲ್ಲ ಪ್ರಮುಖ ಮತ್ತು ಸೂಕ್ಷ್ಮ ಸ್ಥಳಗಳಲ್ಲಿ, ರಾತ್ರಿಯಲ್ಲೂ ಚಿತ್ರಗಳನ್ನು ಸೆರೆಹಿಡಿಯಬಹುದಾದ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸರಕಾರ ಚಿಂತನೆ ನಡೆಸಿದೆ ಎಂದು ಗೃಹ ಸಚಿವ ಆರ್ ಅಶೋಕ ಅವರು ಹೇಳಿದ್ದಾರೆ.
ಈ ಯೋಜನೆಗೆ ಕೇಂದ್ರ ಸರಕಾರ ಬಂಡವಾಳವನ್ನು ನೀಡುತ್ತಿದ್ದು, ಉಗ್ರರ ಚಲನವಲನಗಳನ್ನು ಮಾತ್ರವಲ್ಲ ಟ್ರಾಫಿಕ್ ನಿಯಮ ಉಲ್ಲಂಘನೆ, ಇತರ ಅಪರಾಧಗಳನ್ನು ಈ ಯೋಜನೆಯ ಅನುಷ್ಠಾನದಿಂದ ಅತ್ಯಂತ ಪರಿಣಾಮಕಾರಿಯಾಗಿ ನಿಗ್ರಹಿಸಬಹುದಾಗಿದೆ ಎಂದು ಅವರು ವಿವರ ನೀಡಿದರು.
ಜನನಿಬಿಡ ಪ್ರದೇಶಗಳಾದ ಮಾರುಕಟ್ಟೆ, ಬಸ್ ಮತ್ತು ರೈಲು ನಿಲ್ದಾಣಗಳಲ್ಲಿ ಇಂತಹ ಕ್ಯಾಮೆರಾಗಳನ್ನು ಅಳವಡಿಸಲು ಪೊಲೀಸರಿಗೆ ಈಗಾಗಲೆ ಸೂಚಿಸಲಾಗಿದೆ. ಕರ್ನಾಟಕ ಹೈಕೋರ್ಟ್ ಗೆ ಸದ್ಯದಲ್ಲೇ ಈ ಸೌಕರ್ಯ ಒದಗಿಸಲಾಗುವುದು ಮತ್ತು ಕೆಳ ನ್ಯಾಯಾಲಯಗಳಲ್ಲಿಯೂ ಕ್ಯಾಮೆರಾ ಅಳವಡಿಸಲಾಗುವುದು ಎಂದು ಅಶೋಕ ನುಡಿದರು.
ವಿಧಾನಸೌಧದಲ್ಲಿ ಇದಕ್ಕಾಗಿ ತೆರೆಯಲಾಗಿರುವ ಕೇಂದ್ರ ನಡೆಸುತ್ತಿರುವ ಕಾರ್ಯವನ್ನು ಅಶೋಕ ವೀಕ್ಷಿಸಿದರು. ವಿಧಾನಸೌಧದ ಮೇಲೆ ಅಳವಡಿಸಲಾಗಿರುವ ಕ್ಯಾಮೆರಾ ಮೂರು ಕಿ.ಮೀ. ದೂರದಗುಂಟ ನಡೆಯುವ ಚಲನವಲನಗಳನ್ನು ಸೆರೆಹಿಡಿಯುತ್ತದೆ.
ಇಷ್ಟು ಮಾತ್ರವಲ್ಲ, ಎಲ್ಲ ಪ್ರಮುಖ ಐಟಿ ಕಂಪನಿ, ಬ್ಯಾಂಕ್, ಆಭರಣದಂಗಡಿ, ಶಾಪಿಂಗ್ ಮಾಲ್ ಗಳಲ್ಲಿ ಕೂಡ ಸಿಸಿಟಿವಿ ಕ್ಯಾಮೆರಾವನ್ನು ಕಡ್ಡಾಯವಾಗಿ ಅಳವಡಿಸಬೇಕೆಂದು ತಾಕೀತು ಮಾಡಲಾಗಿದೆ ಎಂದು ಗೃಹ ಮತ್ತು ಸಾರಿಗೆ ಸಚಿವರು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಪ್ರಮುಖ ನಗರಗಳಾದ ಮೈಸೂರು, ಹುಬ್ಬಳ್ಳಿ ಮತ್ತು ಬೆಳಗಾವಿಗಳಲ್ಲಿಯೂ ಇದೇ ರೀತಿಯ 24 ಗಂಟೆಗಳ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು ಎಂದು ಅಶೋಕ ಹೇಳಿದರು.












Click it and Unblock the Notifications