ರಸ್ತೆ ದಾನ ಮಾಡಿದ ಕಲಿಯುಗದ ಕರ್ಣ ಕೊಲಾಕೊ
ಇಂತಹ ಅತ್ಯಾಧುನಿಕ ಸೌಕರ್ಯಗಳನ್ನು ಹೊಂದಿರುವ ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೀರ ಹತ್ತಿರದಲ್ಲಿರುವ ರಸ್ತೆಯನ್ನು ರಾಜ್ಯಕ್ಕೆ ಅರ್ಪಿಸಿದವರು ಮಂಗಳೂರಿನ ಮೂಲದ ರೊನಾಲ್ಡ್ ಕೊಲಾಕೊ ಎಂಬ ಕರ್ಣ. ಈ ರಸ್ತೆಯನ್ನು ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಉದ್ಘಾಟಿಸಿ, ರೊನಾಲ್ಡ್ ಅವರ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
"ಇಂದಿನ ಕಾಲದಲ್ಲಿ ಅನ್ಯರ ತಲೆಯ ಮೇಲೆ ಹೊಡೆದಾದರೂ ಭೂ ಕಬಳಿಸುವವರೇ ತುಂಬಿಕೊಂಡಿದ್ದಾರೆ. ಅಂಥದರಲ್ಲಿ ತಾವೇ ಅಭಿವೃದ್ಧಿಪಡಿಸಿ, ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎಂದು ಚಿಂತಿಸುವಂತಹ ರೊನಾಲ್ಡ್ ಅಂಥವರು ಸಿಗುವುದು ಅಪರೂಪ. ಸರಕಾರದ ಕೆಲಸವನ್ನು ಉಳಿಸಿ ಅನ್ಯರಿಗೆ ಉತ್ತಮ ಹಾದಿ ಹಾಕಿಕೊಟ್ಟಿದ್ದಾರೆ" ಎಂದು ಡಿವಿಎಸ್ ಕೊಲಾಕೊ ಅವರನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಲಾಕೊ ಅವರು, "ನಾನು ನೀಡಿದ ಅತ್ಯಲ್ಪ ಕಾಣಿಕೆಗೆ ಹಾರ ಹಾಕಿ, ಪೇಟ ತೊಡಿಸಿ ಗೌರವಿಸಿದ್ದು ತುಂಬಾ ಸಂಸತ ನೀಡುತ್ತಿದೆ. ಇದೇ ರೀತಿ ಬೇರೆಯವರು ಕೂಡ ಜನರಿಗೆ ಅನುಕೂಲವಾಗುವಂತೆ ಸೇವೆ ಮಾಡಲು ಮುಂದೆ ಬಂದರೆ ಇದಕ್ಕಿಂತ ಹೆಚ್ಚಿನ ಸಂತೋಷವಾಗುತ್ತದೆ" ಎಂದರು.
ಈ ರಸ್ತೆ ಸಾದಹಳ್ಳಿ, ನವರತ್ನ ಅಗ್ರಹಾರ, ಬೋವಿಪಾಳ್ಯ ಗ್ರಾಮ ಮತ್ತು ಹಾಲಿವುಡ್ ರೆಸಿಡೆನ್ಶಿಯಲ್ ಟೌನ್ ಶಿಪ್, ಸ್ವಿಸ್ ಟೌನ್ ಶಿಪ್ ಗಳನ್ನು ಜೋಡಿಸುತ್ತದೆ. ಇಲ್ಲಿ ಏನಿಲ್ಲವೆಂದರೂ ಸಾವಿರ ಕುಟುಂಬಗಳಿಗೆ ಈ ರಸ್ತೆ ಅನುಕೂಲವಾಗಿ ಪರಿಣಮಿಸಿದೆ.