ಲೋಕಾಯುಕ್ತ ಎದುರು ರತ್ನಾಕರ ಯಾವಾಗ ಹಾಜರು ಮಿರ್ಜಿ ಸಾಹೇಬರೇ?

ಅಂದಹಾಗೆ ಈ ರತ್ನಾಕರ ಶೆಟ್ಟಿ ತಾವು ಮಾಡಿರುವ ಘನಂದಾರಿ ಕೆಲಸದಿಂದಾಗಿ ಇಂದು ಪಾತಾಳದಲ್ಲೇ ಇದ್ದರೂ ಕೈಕೋಳ ತೊಡಿಸಿಕೊಳ್ಳಲೇಬೇಕು. ಅಥವಾ ಮಾನಗೆಟ್ಟ ಭ್ರಷ್ಟ ರಾಜಕಾರಣಿಗಳ ಥರ ನಿರೀಕ್ಷಣ ಜಾಮೀನಿಗೆ ಈಗಾಗಲೇ ಅರ್ಜಿ ಗುಜರಾಯಿಸಿದ್ದಾರಾ!?. ಒಬ್ಬ ಪೊಲೀಸ್ ಅಧಿಕಾರಿಯೇ ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗುವುದು ಇಲಾಖೆಯ ದೌರ್ಭಾಗ್ಯವೇ ಸರಿ. ಖುದ್ದು ಮಿರ್ಜಿ ಸಾಹೇಬರೇ ತಮ್ಮ ಶಿಷ್ಯನನ್ನು ತಂದು ಲೋಕಾಯುಕ್ತದ ಎದುರು ಹಾಜರುಪಡಿಸುತ್ತಾರಾ?
ಸದ್ಯಕ್ಕೆ ಅಮೃತಹಳ್ಳಿ ಠಾಣೆಯ ಇನ್ಸ್ಪೆಕ್ಟರ್ ಆಗಿರುವ ರತ್ನಾಕರ ಶೆಟ್ಟಿ ನಿಜಕ್ಕೂ ಟಾಸ್ಕ್ ಮಾಸ್ಟರ್. ಅಟ್ ಲೀಸ್ಟ್, ಮಾಧ್ಯಮಗಳಲ್ಲಿ ಆ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಆದರೆ ಇದೀಗ ತಮ್ಮ ಏಜೆಂಟ್, ಕಾನ್ಸ್ಟೆಬಲ್ ಶೋಯಲ್ ಜತೆಗೂಡಿ ಲಂಚಕ್ಕೆ ಕೈಯೊಡ್ಡಿದ್ದಾರೆ. ಅಷ್ಟೇ ಅಲ್ಲ ತಮ್ಮನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಬಂದ ಲೋಕಾಯುಕ್ತರಿಗೆ ಹೆದರಿ ಇಲಾಖೆಯ ವಾಕಿಟಾಕಿಯೊಂದಿಗೇ ಪರಾರಿಯಾಗಿದ್ದು, ಈ ಕ್ಷಣದ ವರೆಗೆ ಪತ್ತೆಯಾಗಿಲ್ಲ.
ಇನ್ಸ್ಪೆಕ್ಟರ್ ರತ್ನಾಕರ ಶೆಟ್ಟಿ ಒಬ್ಬ ದಿಟ್ಟ ಅಧಿಕಾರಿಯೇ. ಅನೇಕ ಕಠಿಣ ಪ್ರಕರಣಗಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ನಗರ ಪೊಲೀಸ್ ಆಯುಕ್ತರು ವಿಶೇಷ ಕಾರ್ಯಾಚರಣೆ ಮತ್ತು ತುರ್ತು ಸಂದರ್ಭಗಳಿಗೆಂದೇ ದಕ್ಷ ಮತ್ತು ಸಾಹಸಮಯ ಇನ್ಸ್ಪೆಕ್ಟರುಗಳ ತಂಡವನ್ನು ಸದಾ ಸನ್ನದ್ದ ಸ್ಥಿತಿಯಲ್ಲಿ ಇಟ್ಟಿರುತ್ತಾರೆ. ರತ್ನಾಕರ ಶೆಟ್ಟಿಯೂ ಈ ವಿಶೇಷ ತಂಡದಲ್ಲಿ ಸ್ಥಾನ ಗಳಿಸಿದ್ದರು. ಆದರೆ ಈಗ ಅದೇ ತಂಡ ಇವರನ್ನು ಹುಡುಕಿಕೊಡಬೇಕಾದ ಪರಿಸ್ಥಿತಿ ಒದಗಿ ಬಂದಿದೆ.












Click it and Unblock the Notifications