ಯಡ್ಡಿ ಕೋರ್ಟಿಗೆ ಬಂದ್ರೆ ಬೆಂಗ್ಳೂರ್ ಗೆ ಪ್ರಾಬ್ಲಂ!
ಇದೇ ಒಂದು ಪಾಯಿಂಟ್ ಹಿಡಿದುಕೊಂಡು ಲಾಜಿಕ್ ಇಲ್ಲದ ವಾದ ಮಂಡಿಸಿದ ಯಡಿಯೂರಪ್ಪ ಪರ ವಕೀಲ ರವಿ ನಾಯ್ಕ್ ಅವರ ಮಾತಿನ ವೈಖರಿಗೆ ಕೋರ್ಟ್ ಹಾಲ್ ದಂಗಾಯಿತು.
ವಿಚಾರಣೆ ಸ್ವಾರಸ್ಯ: ಬುಧವಾರ ಮಧ್ಯಾಹ್ನ ಆರಂಭವಾದ ಡಿನೋಫಿಕೇಷನ್ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ರವಿ ನಾಯ್ಕ ಅವರ ವಾದ ಹೀಗಿತ್ತು:
'ಮಹಾಸ್ವಾಮಿ, ನನ್ನ ಕಕ್ಷಿದಾರ ಮಾಜಿ ಮುಖ್ಯಮಂತ್ರಿಗಳಾಗಿದ್ದು, ಈಗಲೂ ಝಡ್ ಶ್ರೇಣಿ ಭದ್ರತೆಯನ್ನು ಹೊಂದಿದ್ದಾರೆ. ನ್ಯಾಯಾಲಯದ ವಿಚಾರಣೆಗೆ ಪದೇ ಪದೇ ಆಗಮಿಸುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ.
ಯಡಿಯೂರಪ್ಪ ಅವರ ಹಿಂದೆ ಬೆಂಗಾವಲಿನ ಪಡೆ ಹಾಗೂ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಿಂಬಾಲಿಸಿಕೊಂಡು ಕೋರ್ಟ್ ಆವರಣಕ್ಕೆ ಬರುತ್ತಾರೆ. ಇದರಿಂದ ಕಾನೂನು ಸುವವ್ಯಸ್ಥೆ ಪಾಲನೆ ಕಷ್ಟವಾಗುತ್ತದೆ.
ಯಡಿಯೂರಪ್ಪ ಕಾಲಿಟ್ಟ ಕಡೆ ಟ್ರಾಫಿಕ್ ಜಾಮ್ ಆಗುತ್ತದೆ. ಪೊಲೀಸ್ ಇಲಾಖೆಗೂ ಭದ್ರತೆ ಒದಗಿಸುವುದು ಕಷ್ಟ. ಜನರ ನಿಯಂತ್ರಣದ ಕಿರಿಕಿರಿ ಅನುಭವಿಸಬೇಕಾಗುತ್ತದೆ. ಕೋರ್ಟ್ ಕಲಾಪಕ್ಕೂ ತೊಂದರೆಯಾಗುತ್ತದೆ.
ಲೋಕಾಯುಕ್ತ ಅಭಿಯೋಜಕರನ್ನು ನೇಮಿಸಿ ಪ್ರತಿ ಶನಿವಾರದಂದೇ ಪ್ರಕರಣದ ವಿಚಾರಣೆ ನಡೆಸಲು ಅನುಮತಿ ನೀಡಬೇಕು. ಈ ಎಲ್ಲಾ ಕಾರಣದಿಂದ ನನ್ನ ಕಕ್ಷಿದಾರರಿಗೆ ಕೋರ್ಟ್ ಹಾಜರಾತಿಯಿಂದ ವಿನಾಯ್ತಿ ನೀಡಬೇಕು' ಎಂದು ಯಡಿಯೂರಪ್ಪ ಪರ ವಕೀಲ ರವಿ ನಾಯ್ಕ್ ನ್ಯಾಯಾಲಯವನ್ನು ಕೋರಿದರು.
ಆದರೆ, ಹಾಜರಾತಿ ವಿನಾಯತಿ ನೀಡದ ನ್ಯಾಯಾಧೀಶ ಎನ್ ಕೆ ಸುಧೀಂದ್ರರಾವ್ ಅವರು ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿ, ಆರೋಪಿಗಳು ಖುದ್ದು ಹಾಜರಾಗಬೇಕು ಎಂದು ಆದೇಶ ನೀಡಿದರು.