ಜಗನ್ ಕುಟುಂಬ ಏಳಿಗೆಗೆ, ರೆಡ್ಡಿ ಕಿರೀಟ ಸೇವೆ

ಕಳೆದ ದಶಕದಲ್ಲಿ ಸುಮಾರು ವಜ್ರ ಖಚಿತ ಬಂಗಾರದ 32 ಕಿರೀಟಗಳನ್ನು ಆಂಧ್ರ ಪ್ರದೇಶ. ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ದೇವಸ್ಥಾನಗಳಿಗೆ ರೆಡ್ಡಿ ಕುಟುಂಬ ನೀಡಿದೆ. ಈ ಕಿರೀಟ ಕಳೆದುಕೊಂಡಿರುವ ಜನಾರ್ದನ ರೆಡ್ಡಿ ಅವರು ನೀಡಿರುವ ಕಿರೀಟ ದಾನ ಸೇವೆಗೂ ಜಗನ್ ಕುಟುಂಬದ ಏಳಿಗೆಗೂ ಭಾರಿ ಕನೆಕ್ಷನ್ ಇರುವುದು ಗೊತ್ತಾಗಿದೆ.
ಬ್ರಹ್ಮಣಿ ಸ್ಟೀಲ್ಸ್ ಗೆ ವೈಎಸ್ ಆರ್ ಅನುಮತಿ(ಚಂದ್ರಬಾಬು ನಾಯ್ಡು ಲೈಸನ್ಸ್ ನೀಡಿದ್ದು ಎಂಬ ಸುದ್ದಿ ಕೂಡಾ ಇದೆ) ನೀಡಿದ ಖುಷಿಯಲ್ಲಿ ಕಂಪನಿ ಏಳಿಗೆಗಾಗಿ ತಿರುಮಲ ತಿರುಪತಿ ದೇಗುಲಕ್ಕೆ ಒಂದು ವಜ್ರಖಚಿತ ದೊಡ್ಡ ಕಿರೀಟ ದಾನ ಮಾಡಿದರು.
ಒಸಿಎಂಗೆ ಗಣಿ ಗುತ್ತಿಗೆ ಪರವಾನಗಿ ಸಿಕ್ಕ ಖುಷಿಯಲ್ಲಿ ಎರಡನೇ ಕಿರೀಟವನ್ನು ತಿಮ್ಮಪ್ಪನಿಗೆ ನೀಡಿದರು. ವೈಎಸ್ ರಾಜಶೇಖರ ರೆಡ್ಡಿ ಆಂಧ್ರ ಚುನಾವಣೆಯಲ್ಲಿ ಜಯಗಳಿಸಿದಾಗ ಮೂರನೇ ಕಿರೀಟ ನೀಡಿದ್ದಾರೆ.
ನಂತರ 2011ರ ಮೇ ತಿಂಗಳಿನಲ್ಲಿ ಕಡಪ ಲೋಕಸಭಾ ಉಪ ಚುನಾವಣೆಯಲ್ಲಿ ಜಗನ್ ಮೋಹನರೆಡ್ಡಿ ಜಯಗಳಿಸಿ ಸಂಸದನಾದ ಸಂದರ್ಭದಲ್ಲಿ ಶ್ರೀಕಾಳಹಸ್ತಿಯ ಶ್ರೀ ಜ್ಞಾನ ಪ್ರಸೂನಾಂಭಿಕಾ ದೇವಿ ದೇವಸ್ಥಾನಕ್ಕೆ 12 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಬಂಗಾರದ ಕಿರೀಟವನ್ನು ಜನಾರ್ದನ ರೆಡ್ಡಿ ದಾನ ಮಾಡಿದ್ದರು.
ವೈಎಸ್ ಆರ್ ಕುಟುಂಬದ ಏಳಿಗೆಯ ಜೊತೆಜೊತೆಗೆ ಬಳ್ಳಾರಿ ರೆಡ್ಡಿ ಸೋದರರು ದಕ್ಷಿಣ ಭಾರತದ ದೇವರುಗಳಿಗೆ ಕಿರೀಟ ತೊಡಿಸತೊಡಗಿದರು. ಆದರೆ, ಇಂದು ಜನಾರ್ದನ ರೆಡ್ಡಿ ಜೊತೆ ಅಂಥ ಸಂಬಂಧವಿಲ್ಲ ಎಂದು ಜಗನ್ ಹೇಳುತ್ತಿದ್ದಾರೆ. ವೈಎಸ್ ಆರ್ ಗೆ ನಿಷ್ಠೆ ಮೆರೆದ ಜನಾರ್ದನ ರೆಡ್ಡಿ ಬಗ್ಗೆ ಕನಿಷ್ಠ ಸಾಂತ್ವನ ಮಾತು ಸಹ ಜಗನ್ ಮೋಹನ್ ರೆಡ್ಡಿ ಕಡೆಯಿಂದ ಬಂದಿಲ್ಲ.












Click it and Unblock the Notifications