ಬಿಎಸ್ ಯಡಿಯೂರಪ್ಪಗೆ ಸೆ.13ರ ತನಕ ರಿಲೀಫ್
ಬುಧವಾರ ಮಧ್ಯಾಹ್ನ 3.15ರ ಸುಮಾರಿಗೆ ನಡೆದ ವಿಚಾರಣೆಗೆ ಈ ಪ್ರಕರಣದ ಪಮುಖ ಆರೋಪಿಗಳಾದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕುಟುಂಬದ ಸದಸ್ಯರ ಸಮೇತ ಹಾಜರಾದರು.
ಭೂಹಗರಣ, ಸ್ವಜನ ಪ್ರೀತಿ, ಅಕ್ರಮ ಗಣಿಗಾರಿಕೆ, ಕಿಕ್ ಬ್ಯಾಕ್ ಸೇರಿದಂತೆ ಸರಿ ಸುಮಾರು 15ಕ್ಕೂ ಹೆಚ್ಚು ಆರೋಪಗಳನ್ನು ಯಡಿಯೂರಪ್ಪ ಎದುರಿಸುತ್ತಿದ್ದಾರೆ.
ಯಡಿಯೂರಪ್ಪ ಅವರಿಗೆ ಕೋರ್ಟ್ ತನಕ ಸಚಿವ ರೇಣುಕಾಚಾರ್ಯ, ಹಾಲಪ್ಪ, ನಂದೀಶ್ ರೆಡ್ಡಿ ಹಾಗೂ ಜೀವರಾಜ್ ಅವರು ಸಾಥ್ ನೀಡಿದರು. ನಂತರ ಯಡಿಯೂರಪ್ಪ ಸೇರಿದಂತೆ ಒಟ್ಟು 13 ಜನ ಆರೋಪಿಗಳು ಕಟಕಟೆಯನ್ನು ಹತ್ತಿದರು.
ವಿಚಾರಣೆ ವಿವರ: ಲೋಕಾಯುಕ್ತ ಅಭಿಯೋಜಕರನ್ನು ನೇಮಿಸಿ ಪ್ರತಿ ಶನಿವಾರದಂದೇ ಪ್ರಕರಣದ ವಿಚಾರಣೆ ನಡೆಸುವಂತೆ ಯಡಿಯೂರಪ್ಪ ಪರ ವಕೀಲ ರವಿ ನಾಯ್ಕ್ ನ್ಯಾಯಾಲಯವನ್ನು ಕೋರಿದರು.
ವಕೀಲ ಸಿರಾಜಿನ್ ಪಾಶಾ ಪರ ಯಾರು ವಕಾಲತ್ತು ವಹಿಸಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರ ವಾಗಿಲ್ಲ. ಸೆ.13ರಂದು ಮಧ್ಯಾಹ್ನ 3 ಗಂಟೆ ಈ ಬಗ್ಗೆ ವಾದ ಮಂಡಿಸುವಂತೆ ಸಿರಾಜಿನ್ ಪರ ವಕೀಲ ಸಿಎಚ್ ಹನುಮಂತರಾಯ ಅವರಿಗೆ ನ್ಯಾಯಮೂರ್ತಿ ಸುಧೀಂದ್ರರಾವ್ ಅವರು ಸೂಚಿಸಿದರು.
ಕೇಸ್ ಹಿಸ್ಟರಿ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಹಾಕಿರುವ ಎಫ್ ಐಆರ್ ರದ್ದುಗೊಳಿಸಿ, ಶಿಕ್ಷೆಯಿಂದ ಪಾರು ಮಾಡುವಂತೆ ಯಡಿಯೂರಪ್ಪ ಅವರು ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ನಾಲ್ಕು ಅರ್ಜಿಯಲ್ಲಿ ಈಗಾಗಲೇ ಎರಡು ಅರ್ಜಿಗಳು ತಿರಸ್ಕಾರಗೊಂಡಿದೆ.
ಭಾರತೀಯ ದಂಡ ಸಂಹಿತೆ ಕಾಯ್ದೆ ಕಲಂ 420, 419,447, 123 ಅಡಿಯಲ್ಲಿ ಕ್ರಿಮಿನಲ್ ಮೊಕದ್ದಮೆ ಎದುರಿಸುತ್ತಿದ್ದಾರೆ. ಆರೋಪ ಸಾಬೀತಾದರೆ 10 ವರ್ಷ ಶಿಕ್ಷೆ ಖಚಿತ.