ಬೆಂಗ್ಳೂರು ಪತ್ರಕರ್ತರಿಗೆ ಚೀಪ್ ಅಂಡ್ ಬೆಸ್ಟ್ ಲಂಚ್
42 ನೇ ವರ್ಷಕ್ಕೆ ಕಾಲಿಡುತ್ತಿರುವ ಕ್ಲಬ್ ತನ್ನ ಸದಸ್ಯರು ಮತ್ತು ದುಡಿಯುವ ಪತ್ರಕರ್ತರ ಅನುಕೂಲಕ್ಕಾಗಿ ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ. ಬೆಳಗಿನಿಂದ ಮಧ್ಯರಾತ್ರಿಯವರೆಗೆ ದುಡಿಯುವ ಕ್ಲಬ್ಬಿನ ಸದಸ್ಯರು ಮತ್ತು ಪತ್ರಕರ್ತರಿಗೆ ಮಧ್ಯಾಹ್ನದ ಊಟ ಒದಗಿಸುವ ಯೋಜನೆ ಅದಾಗಿದೆ.
ಅತ್ಯುತ್ತಮ ರುಚಿ, ಶುಚಿಯಾದ ಭೋಜನ ನೀಡಲು ನಗರದ ಇಸ್ಕಾನ್ (ISKCON) ಸಂಸ್ಥೆ ಸಹಯೋಗದೊಂದಿಗೆ ಮಧ್ಯಾನ್ಹದ ಊಟದ ಯೋಜನೆ ಪ್ರೆಸ್ಕ್ಲಬ್ನಲ್ಲಿ ಸೆ. 5ರಿಂದ ಜಾರಿಗೆ ಬಂದಿದೆ. ಈ ಯೋಜನೆಯನ್ನು ಸಚಿವ ಆರ್ ಅಶೋಕ್ ಸೋಮವಾರ ಉದ್ಘಾಟಿಸಿದರು. ಕ್ಲಬ್ ಅಧ್ಯಕ್ಷ ಪೊನ್ನಪ್ಪ ಉಪಸ್ಥಿತರಿದ್ದರು.
ಅಪರಾಹ್ನ 1 ರಿಂದ 3 ಗಂಟೆಯವರೆಗೆ ಪತ್ರಕರ್ತರು, ಛಾಯಾಚಿತ್ರಕಾರರು ಮತ್ತು ಕ್ಲಬ್ ಸದಸ್ಯರಿಗೆ 10 ರೂ. ಬೆಲೆಯಲ್ಲಿ ಪುಷ್ಕಳ ಭೋಜನ ನೀಡುವ ಕಾರ್ಯಕ್ರಮ ಜಾರಿಯಾಗಿದ್ದು, ಮಾಧ್ಯಮ ಮಿತ್ರರು ಇದರ ಪ್ರಯೋಜನ ಪಡೆಯಬೇಕೆಂದು ಕಾರ್ಯದರ್ಶಿ ಸದಾಶಿವ ಶೆಣೈ ಮಂಗಳವಾರ ದಟ್ಸ್ ಕನ್ನಡಕ್ಕೆ ತಿಳಿಸಿದರು.
ಕ್ಲಬ್ ಸುತ್ತಮುತ್ತ ಬರೀ ತ್ರಿತಾರಾ, ಚತುರ್ತಾರಾ, ಪಂಚತಾರಾ ಹೋಟೆಲುಗಳೇ ಆವರಿಸಿಕೊಂಡಿದ್ದು ಕೈಗೆಟಕುವ ಬೆಲೆಯಲ್ಲಿ ಮಧ್ಯಾನ್ಹದ ಊಟ ಮಾಡುವುದು ತುಂಬಾ ತೊಂದರೆ ಆಗಿತ್ತು. ಈ ಕೊರತೆ ನಿವಾರಣೆ ಮಾಡುವುದೇ ಮಧ್ಯಾಹ್ನ ಪುಷ್ಕಳ ಭೋಜನ ಕಾರ್ಯಕ್ರಮದ ಉದ್ದಿಶ್ಯ ಎಂದು ಶೆಣೈ ವಿವರಿಸಿದರು.
ಓದುವ ಬರೆಯುವ ಪತ್ರಕರ್ತರಿಗೆ ಈ ಭೋಜನ 10 ರೂ. ಬೆಂಬಲ ಬೆಲೆಯಲ್ಲಿ ಲಭ್ಯವಾಗಿದ್ದು ಅದೂ ಫುಲ್ ಮೀಲ್ಸ್ ಆಗಿರುವುದರಿಂದ ದಿಲ್ ಖುಷ್ ಆಗಿದೆ ಎಂದು ಸೋಮವಾರ ಊಟ ಸವಿದ ಗೆಳೆಯರು ದಟ್ಸ್ ಕನ್ನಡ ವರದಿಗಾರರಿಗೆ ತಿಳಿಸಿದರು.