ರೆಡ್ಡಿಗಳಿಗೆ ತಟ್ಟಿದ ಸುಗ್ಗಲಮ್ಮ ದೇವಿಯ ಶಾಪ?

ಕಾಕತಾಳೀಯವೆಂಬಂತೆ ಸುಗ್ಗಲಮ್ಮ ಗುಡಿ ಧ್ವಂಸವಾಗಿ ಇಂದಿಗೆ ಸರಿಯಾಗಿ ಐದು ವರ್ಷಗಳಾಗಿವೆ. ಬಳ್ಳಾರಿ ಜಿಲ್ಲೆಯ ಗಣಿ ಹಗರಣ ಕರ್ನಾಟಕ - ಆಂಧ್ರದ ಗಮನ ಸೆಳೆದಿದ್ದೇ ಸುಗ್ಗಲಮ್ಮ ಗುಡಿ ಧ್ವಂಸ ಪ್ರಕರಣದಿಂದ.
2006ರ ಸೆಪ್ಟೆಂಬರ್ 3ರ ಒಂದು ವಾರ ಪೂರ್ವದಿಂದಲೇ ಸುಗ್ಗಲಮ್ಮ ಗುಡಿಯಲ್ಲಿ ಕೇರಳ - ತಮಿಳುನಾಡು ಮೂಲದ ಮಾಂತ್ರಿಕರು ಹಗಲಿರುಳೂ ನಾನಾ ಪೂಜೆಗಳನ್ನು ನಡೆಸಿ, ಬಲಿಗಳನ್ನು ನೀಡಿ ಈ ದೇವಸ್ಥಾನವನ್ನೇ ಸ್ಪೋಟಿಸಿದ್ದರು. ಈ ಪ್ರಕರಣ ರಾಜಕೀಯ ಬಣ್ಣ ಪಡೆದು ಪರ - ವಿರೋಧ ಮೊಕದ್ದಮೆಗಳು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು.
ಈ ಕುರಿತು ಸಿಬಿಐ ಕೂಡ ಗಮನ ನೀಡಿ ಸುಗ್ಗಲಮ್ಮ ಗುಡಿ ಇದ್ದ ಸ್ಥಳಕ್ಕೆ ಜನೆವರಿಯಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸಿಬಿಐ ಅಧಿಕಾರಿಗಳಾದ ಲಕ್ಷ್ಮೀನಾರಾಯಣ ಮತ್ತು ಖಾನ್ ನೇತೃತ್ವದ ತಂಡ ಸುಗ್ಗಲ್ಲಮ್ಮ ದೇವಸ್ಥಾನದ ಸಂಪೂರ್ಣ ಮಾಹಿತಿ ಸಂಗ್ರಹಸಿದ್ದಾರೆ. ಗುಡಿಯನ್ನು ಓಎಂಸಿ ಸ್ಪೋಟಿಸಿ ಮೂರ್ತಿಯ ಕೆಳಗಿದ್ದ ಅಪಾರ ಪ್ರಮಾಣದ ಮೌಲ್ಯಯುಕ್ತ ಅದಿರನ್ನು ಲೂಟಿ ಮಾಡಿರುವುದು ಸಾಬೀತಾಗಿತ್ತು.
1896ರ ನಕ್ಷೆಯ ಆಧರಿಸಿ ತನಿಖೆ ನಡೆಸಿದ ಅಧಿಕಾರಿಗಳು, ಐತಿಹಾಸಿಕ ಮಹತ್ವ ಹೊಂದಿದ್ದ ದೇವಸ್ಥಾನ ಇಲ್ಲಿತ್ತು, ಈಗೆಲ್ಲಿದೆ ಎಂದು ಓಎಂಸಿ ಸಿಬ್ಬಂದಿಯನ್ನು ಖಾರವಾಗಿಯೇ ಪ್ರಶ್ನಿಸಿದ್ದರು. ಆಗ, ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ. ಶ್ರೀನಿವಾಸ ರೆಡ್ಡಿ ದೇವಸ್ಥಾನ ಇಲ್ಲಿ ಇರಲೇ ಇಲ್ಲ, ಸ್ಪೋಟಿಸುವ ವಿಚಾರ ಎಲ್ಲಿ? ಎಂದಿದ್ದರು. ಓಎಂಸಿ ಮೈನ್ಸ್ ಮ್ಯಾನೇಜರ್ ಶಿವಕುಮಾರ್ ಇಲ್ಲಿ ಸಣ್ಣದಾದ ಗುಡಿ ಇತ್ತು, ಗಣಿ ಚಟುವಟಿಕೆಗಳ ಸಂದರ್ಭದಲ್ಲಿ ಹಾಳಾಗಿದೆ ಎಂದಿದ್ದರು.
ವಿಚಾರಣೆ ಮುಂದುವರೆದಾಗ ಬಿ. ಶ್ರೀನಿವಾಸ ರೆಡ್ಡಿ ಅವರು ನಾವು ಹೊಸದಾಗಿ ದೊಡ್ಡದಾದ ಗುಡಿ ಕಟ್ಟಿಸಿದ್ದೇವೆ ಎಂದು ಹೇಳಿ ತನಿಖೆಯ ದಿಕ್ಕಿಗೆ ಸ್ಪಷ್ಟತೆ ನೀಡಿದರು. ಸಿಬಿಐ ಅಧಿಕಾರಿ ನೀವು ಗುಡಿಯನ್ನು ಸ್ಪೋಟಿಸಿಲ್ಲ ಎನ್ನುವುದಾದಲ್ಲಿ ಹೊಸ ಗುಡಿಯನ್ನೇಕೆ ನಿರ್ಮಿಸಿದ್ದೀರಿ? ಎಂದಾಗ ಎಲ್ಲರೂ ಮೌನ. ಸುಗ್ಗಲಮ್ಮ ಗುಡಿಯನ್ನು ಧ್ವಂಸ ಮಾಡಿದ್ದೇ ಸಿಬಿಐ ತನಿಖೆಯಲ್ಲಿ ಪ್ರತ್ಯೇಕವಾಗಿ ಪರಿಶೀಲನೆಗೆ ಒಳಪಟ್ಟಿದೆ.












Click it and Unblock the Notifications