22 ಕೋಟಿ ಸಾಲ ಪಡೆದ ಪೊಲೀಸರ ಕಾಲಿಗೆ ಬಿದ್ದ

ಹಗರಿ ಸಮೀಪದಲ್ಲಿ ಇರುವ ಜಾನಕಿ ಸ್ಟೀಲ್ಸ್ ಕೈಗಾರಿಕೆಯಲ್ಲಿ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿರುವ ಭರತ್ಕುಮಾರ್ ಮತ್ತು ಆತನ ಪತ್ನಿ ಹಾಗೂ ಪುತ್ರರು ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಆಗಮಿಸಿ ಪೊಲೀಸ್ ವರಿಷ್ಠಾಧಿಕಾರಿ ಡಾ. ಚಂದ್ರಗುಪ್ತ ಅವರ ಸಮ್ಮುಖದಲ್ಲಿ ಶರಣಾಗಿದ್ದಾನೆ.
ಭರತಕುಮಾರ್ ಗಣಿಗಾರಿಕೆಯಲ್ಲಿ ಇರುವ ಹಣಕ್ಕೆ ಆಸೆಬಿದ್ದು ಅನೇಕರ ಜೊತೆ ಸಾಲ ಪಡೆದು ಅದಿರು ಟ್ರೇಡಿಂಗ್ (ಕೊಡು - ಕೊಳ್ಳುವ) ವ್ಯಾಪಾರಕ್ಕೆ ಇಳಿದಿದ್ದನು. ಕೆಲವರನ್ನು ಪಾಲುದಾರರನ್ನಾಗಿ ಸೇರಿಸಿಕೊಂಡಿದ್ದನು. ಇನ್ನೂ ಕೆಲವರು ಕೈಗಡ ನೀಡಿದ್ದರು. ಈ ವ್ಯವಹಾರದಲ್ಲಿ ಈತನಿಗೆ ತೀವ್ರ ಆರ್ಥಿಕ ನಷ್ಟ ಉಂಟಾಯಿತು.
ಸಾಲ ನೀಡಿದವರು ಸಾಲು ಸಾಲಾಗಿ ಮನೆಯ ಮುಂದೆ ಕಾಣಿಸಿಕೊಂಡು ಸಾಲಕ್ಕಾಗಿ ಪೀಡಿಸತೊಡಗಿದರು. ಕೆಲವರು ಈತನನ್ನು ಅಪಹರಿಸಿ ಸಿಕ್ಕಷ್ಟು ಹಣ ಕಸಿದುಕೊಂಡು ಬಿಟ್ಟರು. ಈ ಮಾಹಿತಿ ಪಡೆದ ಅನೇಕರು ನಿತ್ಯವೂ ಮನೆಗೆ ಹೋಗಿ ಹಣ ನೀಡಲು ಬೆದರಿಕೆ ಹಾಕುತ್ತಿದ್ದರು.
ಈತನದ್ದು ಒಟ್ಟು ಸಾಲ 21 ಕೋಟಿ 80 ಲಕ್ಷ ರೂಪಾಯಿ. ಇದರಲ್ಲಿ 9ರಿಂದ 10 ಕೋಟಿ ರೂಪಾಯಿ ಆಸುಪಾಸಿನಷ್ಟು ಹಣವನ್ನು ಮರುಪಾವತಿ ಮಾಡಿದ್ದನು. ಉಳಿದ ಹಣಕ್ಕಾಗಿ ಸಾಲಗಾರರಲ್ಲಿ ಕಾಲಾವಕಾಶ ಕೋರಿದ್ದನು. ಆದರೆ, ಯಾರೊಬ್ಬರೂ ಕೂಡ ಈತನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಡಾ. ಚಂದ್ರಗುಪ್ತ ಅವರು, ಈತನಿಗೆ ಸಾಲ ನೀಡಿದ ಎಲ್ಲರನ್ನೂ ಕರೆಯಿಸಿ, ಸಭೆಯನ್ನು ನಡೆಸಿದರು.
'ಭರತಕುಮಾರನಿಂದ ಯಾರೊಬ್ಬರೂ ಕೂಡ ನಷ್ಟಕ್ಕೊಳಗಾಗುವುದು ಬೇಡ. ಸಾಧ್ಯವಿರುವ ಎಲ್ಲಾ ಆರ್ಥಿಕ ಮೂಲಗಳನ್ನು ಪೊಲೀಸರು ಪತ್ತೆ ಮಾಡಿ, ಸಿಕ್ಕ ಹಣವನ್ನು ಎಲ್ಲರಿಗೂ ಹಂಚುವ ಪ್ರಯತ್ನ ಮಾಡಲಾಗುತ್ತದೆ. ಈತನಿಗೆ ಯಾರೂ ಪ್ರಾಣಬೆದರಿಕೆ ಹಾಕುವುದು ಬೇಡ" ಎಂದು ಸಾಲ ನೀಡಿದವರಿಗೆ ಮನವಿ ಮಾಡಿದರು. ಭರತಕುಮಾರಿಗೆ ಹಣದ ಮೂಲಗಳ ಮಾಹಿತಿ ನೀಡಲು ಕಟ್ಟುನಿಟ್ಟಾದ ಆದೇಶ ನೀಡಿದರು.












Click it and Unblock the Notifications