ಅನಂತ ಸಂಪತ್ತು; ಬಿ ಕೊಠಡಿ ಸುಪ್ರೀಂ ನಿರ್ಧಾರ ಮುಂದೂಡಿಕೆ
ಇದೀಗ ತಾನೆ ಬಂದ ವರದಿಯ ಪ್ರಕಾರ ಅನಂತಪದ್ಮನಾಭ ದೇಗುಲದ ಬಿ ಉಗ್ರಾಣ ತೆರೆಯುವ ನಿರ್ಧಾರ ಕುರಿತಾದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್ 6ಕ್ಕೆ ಮುಂದೂಡಿದೆ.
ಆದರೆ ಕೋರ್ಟಿಗೆ ರಾಜಮನೆತನ ಸಲ್ಲಿಸಿರುವ ಅರ್ಜಿ ತಿರುಳು ಎಷ್ಟು ಸತ್ಯಾಂಶದಿಂದ ಕೂಡಿದೆ...? "ಬಿ" ಕೊಠಡಿ ತೆರೆದರೆ ನಿಜಕ್ಕೂ ಕೆಡಕುಂಟಾಗುತ್ತದೆಯೆ...? ದೈವಜ್ಞರ ಅಭಿಪ್ರಾಯ ತಿರುಚಲಾಗಿದೆಯೆ...? ರಾಜಮನೆತನದ ಹಿರಿಯ ಮಾರ್ತಂಡ ವರ್ಮ ದೇಗುಲದ ಆಭರಣಗಳನ್ನು ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆಯೆ ….? ಈ ವಿದ್ಯಮಾನಗಳ ಸುತ್ತ ಅನುಮಾನಗಳ ಹುತ್ತ ಬೃಹದಾಕಾರವಾಗಿ ಬೆಳೆಯುತ್ತಿದೆ!
ಅನಂತ ಪದ್ಮನಾಭ ದೇಗುಲಕ್ಕೆ ಸಾವಿರಾರು ವರ್ಷಗಳ ಇತಿಹಾಸ. ಅಂದಿನಿಂದಲೂ ದೇವಾಲಯದಲ್ಲಿ ಮುತ್ತು-ರತ್ನ-ವಜ್ರ-ವೈಢೂರ್ಯ-ಚಿನ್ನ-ಬೆಳ್ಳಿ ಸಂಗ್ರಹಣೆಯಾಗಿದೆ. ಊಹೆಗೂ ಮೀರಿದ ಸಂಪತ್ತಿನ ಜಮಾವಣೆಯಾಗಿದೆ. ಸಂಪೂರ್ಣ ಚಿನ್ನದಿಂದಲೇ ಮಾಡಿದ ಬೃಹದಾಕಾರದ ವಿಗ್ರಹ-ಆಭರಣಗಳ ವಿವರ ತಿಳಿದರೆ ಅಚ್ಚರಿ ಬೆರೆತ ದಿಗ್ಭ್ರಮೆಯಾಗುತ್ತದೆ. ಇಂಥ ಆಸ್ತಿ ಅನ್ಯರ ಪಾಲಿಗೆ ಸುಲಭದ ತುತ್ತಾಗದಂತೆ 'ಎತ್ತರ ಯೋಗಂ" ಹದ್ದಿನ ಕಣ್ಣಿನಂತೆ ದೃಷ್ಟಿಯಿಟ್ಟು ಕಾಪಾಡುತ್ತಿತ್ತು.
ಈ ಸಮಿತಿಗೆ ವಿರುದ್ಧವಾಗಿ ರಾಜ ಮಾರ್ತಂಡ ವರ್ಮ ದೇಗುಲವನ್ನು 'ರಾಜ ಪ್ರಭುತ್ವದ ವಶ" ಮಾಡಿಕೊಂಡಾಗ ಅಸಮಾಧಾನದ ಭುಗಿಲ್ಲೆದಿತ್ತು. ಮುಂದೆ ಈ ರಾಜನೆ ಪದ್ಮನಾಭನಿಗೆ ಸಕಲವನ್ನು ಸಮರ್ಪಿಸಿ ದಾಸನಾಗಿ ಅಧಿಕಾರ ನಡೆಸಿದ. ಇದರ ವಿವರಗಳೆಲ್ಲವೂ ಹಿಂದಿನ ಲೇಖನಗಳಲ್ಲಿವೆ.
ಅತ್ಯಮೂಲ್ಯ ಸಂಪತ್ತುಳ್ಳ ಭಂಡಾರದ ವಿವರ ಹೊರ ಪ್ರಪಂಚಕ್ಕೆ ತಿಳಿಯುವಂತೆ ಮಾಡಿದ್ದು ನಿವೃತ್ತ ಐ.ಪಿ.ಎಸ್. ಅಧಿಕಾರಿ ಸುಂದರ ರಾಜನ್. ಇವರ ಕುಟುಂಬ ಕೂಡ ದೇಗುಲ ಮತ್ತು ರಾಜ ಮನೆತನಕ್ಕೆ ನಿಕಟವರ್ತಿಯಾಗಿತ್ತು ಎಂಬುದು ಬಹಳ ಗಮನಾರ್ಹ. ಅಪಾರ ಧಾರ್ಮಿಕ ನಂಬಿಕೆಯ ಕುಟುಂಬದ ವ್ಯಕ್ತಿಯೇಕೆ ಅನಂತ ಪದ್ಮನಾಭ ದೇಗುಲ ಮತ್ತು ಅದರ ಸಂಪತ್ತು ಸರಕಾರದ ಪರಿಧಿಗೆ ಒಳಪಡಬೇಕು ಎಂದು ಬಯಸಿದರು…? ದೇಗುಲದ ಐಶ್ವರ್ಯಕ್ಕೆ ಸಂಬಂಧಿಸಿ ಅವ್ಯವಹಾರಗಳಾಗುತ್ತಿದ್ದವೆ…? ಸಂಪತ್ತಿನ ಸೋರಿಕೆಯಾಗುತ್ತಿತ್ತೆ….?
ಈ ಅನುಮಾನ ಬಗೆಹರಿಸಲು ಸುಂದರ ರಾಜನ್ ಇಲ್ಲ. 2011ರ ಜುಲೈ 17 ರಂದು ಮೃತರಾಗಿದ್ದಾರೆ. ಈ ಬಳಿಕ ಅಂದರೆ ಆಗಸ್ಟ್ 19 ರಂದು ಕೇರಳದ ಮಾಜಿ ಮುಖ್ಯಮಂತ್ರಿ ಕೇರಳ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದ್ ಅವರು ಟ್ರಾವೆಂಕೂರು ರಾಜವಂಶದ ಈಗಿನ ಮುಖ್ಯಸ್ಥ ಮಾರ್ತಂಡ ವರ್ಮ ಮೇಲೆ ಮಾಡಿರುವ ವಾಗ್ದಾಳಿ ಇದರ ಮೇಲೆ ಬೆಳಕು ಚೆಲ್ಲಬಹುದೆ…?