ಲೋಕಸಭೆಯಲ್ಲಿ ಗೌಡ, ಲಾಲು ಲೋಕಾಭಿರಾಮ!

ಮೊದಲು ರಾಜ್ಯಸಭೆಯಲ್ಲಿ ನಂತರ ಲೋಕಸಭೆಯಲ್ಲಿ ಧ್ವನಿಮತದ ಮೂಲಕ ಮತದಾನ ನಡೆಯಲಿದೆ. ಆದರೆ, ಮತದಾನದ ಫಲಿತಾಂಶ ಪ್ರಕಟವಾದ ಬಳಿಕವೇ ನಿರಶನ ಕೊನೆಗೊಳಿಸುವ ಪಟ್ಟನ್ನು ಅಣ್ಣಾ ಹಜಾರೆ ಹಿಡಿದಿದ್ದಾರೆ. ಈ ನಡುವೆ, ತೀವ್ರ ನಿತ್ರಾಣರಾಗಿರುವ ಅಣ್ಣಾ ಅವರು ಉಪವಾಸ ಕೊನೆಗೊಳಿಸಬೇಕೆಂದು ಎಲ್ಲ ಕಡೆಯಿಂದಲೂ ಒತ್ತಾಯ ಬರುತ್ತಿವೆ.
ಇಂದು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಸಾಕಷ್ಟು ನಾಯಕರು ತಮ್ಮ ವಿಚಾರಗಳನ್ನು ಮಂಡಿಸಿದ್ದಾರೆ. ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಅತ್ಯಂತ ಸ್ಫೂರ್ತಿದಾಯಕವಾಗಿ ಮಾತುಗಳನ್ನಾಡಿದರೆ, ಎಂದಿನಂತೆ ಅಣ್ಣಾ ಉಪವಾಸ ಕುರಿತು ಲಾಲೂ ಪ್ರಸಾದ್ ಯಾದವ್ ತಮಾಷೆ, ವ್ಯಂಗ್ಯಭರಿತ ಮಾತುಗಳನ್ನು ಆಡಿದ್ದಾರೆ.
ಭ್ರಷ್ಟಾಚಾರ ಕುರಿತಂತೆ 'ಚಿಂತನೆ'ಯಲ್ಲಿ ಮುಳುಗಿದ್ದ 77ರ ಹರೆಯದ ಕರ್ನಾಟಕದ ಸಂಸದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ತಮ್ಮ ಸರದಿ ಬಂದಾಗ ದಡಬಡಿಸಿ ಎದ್ದು ಭ್ರಷ್ಟಾಚಾರ ಕೊನೆಗೊಳಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಯುಪಿಎ ಸರಕಾರವನ್ನು ಆಗ್ರಹಿಸಿದರು. ತಮ್ಮ ಭಾಷಣದಲ್ಲಿ ಬಿಎಂಐಸಿ ಹಗರಣದ ಬಗ್ಗೆ ಅವರು ಪ್ರಸ್ತಾಪಿಸಿದರು.
ದೇವೇಗೌಡ ಹೇಳಿದ್ದು
* ಅಣ್ಣಾ ಉಪವಾಸ ಅಂತ್ಯಗೊಳಿಸಲು ಕೇಂದ್ರ ನಡೆಸುತ್ತಿರುವ ಯತ್ನ ಶ್ಲಾಘನೀಯ.
* ಬೆಂಗಳೂರು-ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಸೇರಿದಂತೆ ಅನೇಕ ಯೋಜನೆಗಳಲ್ಲಿ ಅಧಿಕಾರಿ ಮತ್ತು ರಾಜಕಾರಣಿಗಳ ಶಾಮೀಲು.
* ವಿದೇಶಿ ಬ್ಯಾಂಕುಗಳಲ್ಲಿ ಇಟ್ಟಿರುವ ಕಪ್ಪುಹಣ ಭಾರತಕ್ಕೆ ತರಬೇಕು.
* ಮಸೂದೆಯ ಗುಣಾವಗುಣಗಳನ್ನು ಸಂಸತ್ತಿನ ಸ್ಥಾಯಿ ಸಮಿಯೇ ನಿರ್ಧರಿಸಬೇಕು.
ಲಾಲೂ ಪ್ರಸಾದ್ ಯಾದವ್
* ಅಣ್ಣಾ ಹಜಾರೆ ಆರೋಗ್ಯ ಬಗ್ಗೆ ಸರಿಯಾದ ವಿವರ ನೀಡುತ್ತಿಲ್ಲವೆಂದು ಕೇಜ್ರಿವಾಲ್, ಕಿರಣ್ ಬೇಡಿ ಮೇಲೆ ಆರೋಪ.
* ಸುದೀರ್ಘ ಕಾಲ ಹೇಗೆ ಉಪವಾಸ ಮಾಡಬೇಕೆಂದು ಅಣ್ಣಾ ನೋಡಿ ಕಲಿಯಬೇಕೆಂದು ವ್ಯಂಗ್ಯ.
* ಸಿವಿಲ್ ಸೊಸೈಟಿ ಆಯ್ಕೆಯಾದದ್ದು ಹೇಗೆ? ಎಂದು ಮತದಾನ ನಡೆಯಿತು?
* ಲೋಕಪಾಲ ಮಸೂದೆ ಬಗ್ಗೆ ಅಣ್ಣಾರನ್ನು ಬೆಂಬಲಿಸುತ್ತಿರುವ ಬಾಲಿವುಡ್ ನಟರಿಗೇ ಏನು ಮಣ್ಣು ಗೊತ್ತು?
* ಸಂಸತ್ತನ್ನು ಸಂಸತ್ತೇ ಕಾಪಾಡಬೇಕು












Click it and Unblock the Notifications