300 ಕೋಟಿಗೆ ಚಿರು ಪ್ರಜಾ ರಾಜ್ಯಂ ಖರೀದಿಸಿದ ಕಾಂಗ್ರೆಸ್
ಸಿಬಿಐ ದಾಳಿಯಿಂದ ತತ್ತರಿಸಿರುವ ವೈಎಸ್ ಜಗನ್ ಮೋಹನ್ ರೆಡ್ಡಿ, ಕುದುರೆ ವ್ಯಾಪಾರಕ್ಕೆ ಇಳಿದಿದ್ದಾರೆ. 5 ರಿಂದ 10 ಕೋಟಿ ರು ನೀಡಿ ಕಾಂಗ್ರೆಸ್ ಶಾಸಕರು, ಸಂಸದರನ್ನು ಖರೀದಿಸಿದ್ದಾರೆ. ವೈಎಸ್ ರಾಜಶೇಖರ್ ರೆಡ್ಡಿ ಅವರ ಹೆಸರು ಆರೋಪ ಪಟ್ಟಿಯಲ್ಲಿ ಕೇಳಿ ಬಂದಿದ್ದಕ್ಕೆ ಬೇಸರಗೊಂಡು ರಾಜೀನಾಮೆ ನೀಡಿದ್ದಾರೆ ಎಂದು ಸುಳ್ಳು ಸುಳ್ಳು ಕಥೆ ಕಟ್ಟಲಾಗಿದೆ.
ಕಾಂಗ್ರೆಸ್ಸಿಗರ ಪಕ್ಷನಿಷ್ಠೆಯನ್ನು ಬದಲಿಸಿ, ವ್ಯವಸ್ಥಿತವಾಗಿ ಆಂಧ್ರ ಕಾಂಗ್ರೆಸ್ ಒಡೆಯಲು ಜಗನ್ ನಡೆಸಿರುವ ತಂತ್ರ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬೊಟ್ಸಾ ಸತ್ಯಾನಾರಾಯಣ ಆರೋಪಿಸಿದ್ದಾರೆ.
ಇದಕ್ಕೆ ಪ್ರತ್ಯುತ್ತರ ನೀಡಿದ ವೈಎಸ್ ಆರ್ ಕಾಂಗ್ರೆಸ್ ವಕ್ತಾರ ಅಂಬಟಿ ರಾಮ್ ಬಾಬು, ಕುದುರೆ ವ್ಯಾಪಾರ ಏನಿದ್ದರೂ ಕಾಂಗ್ರೆಸ್ ಸಂಸ್ಕೃತಿಗೆ ಸರಿಹೊಂದುತ್ತದೆ. ಚಿರಂಜೀವಿ ಅವರ ಪ್ರಜಾರಾಜ್ಯಂ ಅನ್ನು ಕೊಂಡುಕೊಳ್ಳಲು ಕಾಂಗ್ರೆಸ್ ಹೈ ಕಮಾಂಡ್ 300 ಕೋಟಿ ರು ವ್ಯಾಪಾರ ಮಾಡಿದೆ ಎಂದಿದ್ದಾರೆ.
ಇದಲ್ಲದೆ, ಪಾರ್ಟಿ ಟಿಕೆಟ್ ಗಳನ್ನು ಮಾರಿಕೊಂಡು ಭರ್ಜರಿ ಲಾಭ ಮಾಡಿಕೊಂಡಿದ್ದ ಚಿರಂಜೀವಿ, ಈಗ ರಾಹುಲ್ ಗಾಂಧಿ ಕೈ ಹಿಡಿದು ದೇಶದ ಮುಂದಿನ ಪ್ರಧಾನಿ ಎಂದು ಘೋಷಿಸುವುದು ನಾಚಿಕೆಗೇಡಿನ ಸಂಗತಿ ಎಂದು ರಾಮ್ ಬಾಬು ಹೇಳಿದ್ದಾರೆ. ಒಟ್ಟಿನಲ್ಲಿ ಚಿರು ಕಾಂಗ್ರೆಸ್ ಸೇರ್ಪಡೆಯಿಂದ ಕಾಂಗ್ರೆಸ್ಸಿಗಿಂತ ರಾಜಕೀಯವಾಗಿ ಚಿರಂಜೀವಿಗೆ ಹೆಚ್ಚು ಲಾಭವಾಗಿರುವುದು ಸುಳ್ಳಲ್ಲ.