ಕಟ್ಟಾ ಸೀದಾ ಮನೆಗೋ ಅಥವಾ ಆಸ್ಪತ್ರೆಯಿಂದ ಜೈಲಿಗೋ?

ಒಂದು ವೇಳೆ ಜಾಮೀನು ಸಿಕ್ಕಿದರೆ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಸೀನಿಯರ್ ಕಟ್ಟಾ, ಆಸ್ಪತ್ರೆಯಿಂದಲೇ ಮನೆಗೆ ತೆರಳಬಹುದು; ಇಲ್ಲದಿದ್ದರೆ ಆಸ್ಪತ್ರೆಯಲ್ಲೇ ಬೆಚ್ಚಗೆ ವಿಶ್ರಾಂತಿ.
ನ್ಯಾ. ವಿ. ಜಗನ್ನಾಥ್, ಸೋಮವಾರ ಮಧ್ಯಾಹ್ನದ ವೇಳೆಗೆ ಅರ್ಜಿಯ ವಿಚಾರಣೆಯನ್ನು ಪೂರ್ಣಗೊಳಿಸಿದರು. ಮಧ್ನಾಹ್ನ 12.30 ರಿಂದ ತೀರ್ಪು ಓದಲು ಪ್ರಾರಂಭಿಸಿದ ನ್ಯಾಯಮೂರ್ತಿಗಳು ಸಂಜೆ 4.30 ರವರೆಗೂ ಮುಂದುವರಿಸಿದರು.
ಆದರೆ ತೀರ್ಪನ್ನು ಸಂಪೂರ್ಣವಾಗಿ ಓದಲು ಸಮಯ ಕೊರತೆ ಎದುರಾದ ಹಿನ್ನೆಯಲ್ಲಿ ತೀರ್ಪು ಪ್ರಕಟ ಪ್ರಕ್ರಿಯೆಯನ್ನು ಮಂಗಳವಾರಕ್ಕೆ ಮುಂದೂಡಿದರು. ಮಂಗಳವಾರ ಮಧ್ಯಾಹ್ನದ ವೇಳೆಗೆ ಕಟ್ಟಾದ್ವಯರ ಮತ್ತು ಶ್ರೀನಿವಾಸ್ ಜಾಮೀನು ಅರ್ಜಿಯ ಭವಿಷ್ಯ ನಿರ್ಧಾರವಾಗಲಿದೆ.
ಕಟ್ಟಾ ಇನ್ ವಿಕ್ಟೋರಿಯಾ ಜೈಲ್ ವಾರ್ಡ್: ಕಟ್ಟಾ ಸುಬ್ರಹ್ಮಣ್ಯನಾಯ್ಡು ಮಾತ್ರ ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಜೈಲು ವಾರ್ಡ್ನಲ್ಲಿದ್ದಾರೆ. ಎರಡು ವಾರಗಳಿಂದ ಜೈಲಿನಲ್ಲಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡುಗೆ ಭಾನುವಾರ ರಾತ್ರಿ ಇದ್ದಕ್ಕಿದ್ದಂತೆ ಎದೆನೋವು, ಹೊಟ್ಟೆನೋವು ಕಾಣಿಸಿಕೊಂಡಿದೆ. ಕೂಡಲೇ ಅವರನ್ನು ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೆ ತಪಾಸಣೆ ಮಾಡಿದ ವೈದ್ಯರು, ಕಟ್ಟಾ ಆರೋಗ್ಯ ಸ್ಥಿರವಾಗಿದ್ದು, ಎದೆನೋವು ಕಾಣಿಸುತ್ತಿಲ್ಲ ಎಂದರು. ಆಗ ಹೊಟ್ಟೆನೋವು ಜೋರಾಗುತ್ತಿದೆ ಎಂದರು. ಹೀಗಾಗಿ, ಅವರನ್ನು ಭಾನುವಾರ ತಡರಾತ್ರಿ ಜಯದೇವದಿಂದ ಮತ್ತೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಯಿತು.
ಕಟ್ಟಾ ಈಗ ವಿಕ್ಟೋರಿಯಾ ಆಸ್ಪತ್ರೆ ಜೈಲ್ ವಾರ್ಡ್ ನಂ. 5ರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಧುಮೇಹ ಕಾಯಿಲೆ ಇರುವುದರಿಂದ ಕಟ್ಟಾ ಕಾಲುಗಳು ಊದಿಕೊಂಡಿದ್ದು, ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.
ಈಗ ವಿಕ್ಟೋರಿಯಾ ಆಸ್ಪತ್ರೆಯ ವಿಐಪಿಗಳ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಕ್ಟೋರಿಯಾದಲ್ಲಿ ಕೈದಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಪ್ರತ್ಯೇಕ ಕೊಠಡಿಯಿದೆ. ಅಲ್ಲಿ ಸುಖಾಸೀನ ಹಾಸಿಗೆಯಿಂದ ಹಿಡಿದು ಎಸಿ ತನಕ ಎಲ್ಲ ರೀತಿಯ ಸೌಕರ್ಯಗಳಿವೆ. ಹೊತ್ತಿಗೆ ಸರಿಯಾದ ಊಟ, ತಿಂಡಿ ಕೂಡ ಸಿಗುತ್ತದೆ. ಕೈದಿ ನಂಬರ್ (7801) ಇರುತ್ತದೆ ಎನ್ನುವುದೊಂದು ಬಿಟ್ಟರೆ ಮತ್ತೇನೂ ಕೊರತೆ ಇರುವುದಿಲ್ಲ.












Click it and Unblock the Notifications