ದನಿ ಸಾವಿರವಾದರೂ ಉದ್ದೇಶ ಮಾತ್ರ ಒಂದೆ!

ಕೋರಮಂಗಲದ ಆನಂದ್ ಸ್ವೀಟ್ಸ್ ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿರುವ ವೀರಪ್ಪ ಗಿರಿಜಾ ಮೀಸೆ ಬಿಟ್ಟು ವೀರಾವೇಶದ ಮಾತುಗಳನ್ನಾಡುತ್ತ ಜನರನ್ನು ಸೆಳೆಯುತ್ತಿದ್ದಾರೆ. ಗದಗ ಜಿಲ್ಲೆ ರೋಣ ತಾಲೂಕಿನವರಾದ ವೀರಪ್ಪ ಇಂಥ ಯಾವುದೇ ಚಳವಳಿಯಿದ್ದರೂ ಆಯಾ ಸನ್ನಿವೇಶಕ್ಕೆ ತಕ್ಕಂತೆ ವೇಷ ಧರಿಸಿ ಹಾಜರ್. ಗೊಮ್ಮಟೇಶ್ವರನೊಬ್ಬನನ್ನು ಬಿಟ್ಟು ಎಲ್ಲ ವ್ಯಕ್ತಿಗಳ ವೇಷ ಧರಿಸಿರುವುದಾಗಿ ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಓಕಳಿಪುರಂನ ಶಮಾ ವಿದ್ಯಾ ಶಾಲಾದಿಂದ ಮುಖ್ಯೋಪಾದ್ಯಾಯ ಅನುಮತಿ ಪಡೆದು ಬಂದಿದ್ದ 9 ಮತ್ತು 10ನೇ ತರಗತಿ ಹುಡುಗರಲ್ಲಿ ಏನೋ ಪುಳಕ. ಅನೇಕರಲ್ಲಿ ಭ್ರಷ್ಟತೆ ಎಂದರೇನು, ಜನ ಲೋಕಪಾಲ ಮಸೂದೆ ಎಂದರೇನು, ಈ ಹೋರಾಟ ನಡೆದಿರುವುದು ಏತಕ್ಕೆ ಎಂಬ ಬಗ್ಗೆ ಖಚಿತವಾಗಿ ಮಾಹಿತಿಯಿತ್ತು. ನಾನೇ ಅಣ್ಣಾ ಹಜಾರೆ ಎಂಬ ಸ್ಟಿಕ್ಕರ್ ಅಂಟಿಸಿಕೊಂಡು, ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಓಡಾಡುತ್ತಿದ್ದರು. ಆ ಮಕ್ಕಳನ್ನು ಕರೆದುಕೊಂಡು ಬಂದ ಪ್ರಾಧ್ಯಾಪಕರಿಗೂ ಒಂದು ಧನ್ಯವಾದ ಹೇಳಲೇಬೇಕು.
ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನ ತರುಣ, ತರುಣಿಯರು ಇನ್ನು ಏನೇ ಬಂದರೂ ಲಂಚ ನೀಡುವುದಿಲ್ಲ. ಜನ ಲೋಕಪಾಲ ಮಸೂದೆ ಮಂಡನೆಯಾಗುವವರೆಗೂ ಅಣ್ಣಾ ಹಜಾರೆ ಕೈಬಿಡುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಮಾನವ ಸರಪಳಿ ನಿರ್ಮಿಸಿ ಅಣ್ಣಾಗೆ ಜೈಕಾರ ಮತ್ತು ಕೇಂದ್ರಕ್ಕೆ ಧಿಕ್ಕಾರ ಕೂಗುತ್ತಿದ್ದರೆ ನಾವೂ ಅವರ ಸರಪಳಿಯ ಭಾಗವಾಗಬೇಕು ಎಂದು ಅನ್ನಿಸದೆ ಇರದು.
ಕೆಲ ಕಾಲೇಜಿನ ಹುಡುಗರು ಪ್ರತಿಭಟನೆ ನಡೆಸಲು ಅನುಮತಿ ನೀಡಿರದಿದ್ದರೂ ಕ್ಲಾಸನ್ನು ಬಂಕ್ ಮಾಡಿ ಚಳವಳಿಗೆ ಧುಮುಕಿದ್ದಾರೆ. ಕಳೆದ ಮೂರು ದಿನಗಳಿಂದ ಕಾಲೇಜಿನತ್ತ ಮುಖ ಮಾಡಿಲ್ಲ. ಜೆಎಸ್ಎಸ್ ಕಾಲೇಜಿನ ಹುಡುಗಿಯರಿಗೆ ಈ ಹೋರಾಟದಲ್ಲಿ ಪಾಲ್ಗೊಂಡಿರುವುದು ಎಲ್ಲಿಲ್ಲದ ಖುಷಿ. ಸಮಾಜಕ್ಕಾಗಿ ಅಲ್ಪ ಕಾಣಿಕೆ ನೀಡುದ್ದೇವೆಂಬ ಹೆಮ್ಮೆ. ಮಸೂದೆ ಮಂಡನೆಯಾಗದಿದ್ದರೆ ಅಣ್ಣಾ ಹೇಳಿದಂತೆ ಜೈಲ್ ಭರೋಗೂ ಸಿದ್ಧ ಎಂದು ವಿದ್ಯಾರ್ಥಿಗಳನೇಕರು ಹೇಳಿದರು.












Click it and Unblock the Notifications