ಅಣ್ಣಾ ಬೆಂಬಲಿಸಿದ 60 ಪ್ರತಿಭಟನಾಕಾರರ ಬಂಧನ

60 protesters arrested in Bellary
ಬಳ್ಳಾರಿ, ಆ. 17 : ಅಣ್ಣಾ ಹಜಾರೆ ಬಂಧನ ಖಂಡಿಸಿ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳ 60 ಪ್ರತಿಭಟನಾಕಾರರನ್ನು ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನದ ಬಳಿ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ. ಎಬಿವಿಪಿ ಕಾರ್ಯಕರ್ತರು 10 ಜನ, ಹಿಂದು ಜಾಗರಣ ವೇದಿಕೆ ಮತ್ತು ದೇಶಭಕ್ತ ನಾಗರಿಕರ ವೇದಿಕೆಯ ಒಟ್ಟು 50 ಜನ ಪ್ರತಿಭಟನಾಕಾರರನ್ನು ಈ ಸಂದರ್ಭದಲ್ಲಿ ಗಾಂಧಿನಗರ ಪೊಲೀಸರು ಬಂಧಿಸಿದ್ದರು.

ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಬಿವಿಪಿ ಮುಖಂಡ ಅಡವಿಸ್ವಾಮಿ, ಭ್ರಷ್ಟಾಚಾರದ ವಿರುದ್ಧ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕುವ ಉದ್ಧೇಶದಿಂದಲೇ ಕೇಂದ್ರ ಸರ್ಕಾರ ಗಾಂಧಿವಾದಿ, 74 ವರ್ಷ ವಯಸ್ಸಿನ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ಕ್ರಮ. ದೆಹಲಿ ಪೊಲೀಸರು ಅವರನ್ನು ಬಂಧಿಸಿರುವ ಅತ್ಯಂತ ಖಂಡನೀಯ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆಡಿಸಿದಂತೆ ಆಡುತ್ತಿರುವ ಪ್ರಧಾನಿ ಡಾ. ಮನಮೋಹನ ಸಿಂಗ್ ಅವರು ಎಷ್ಟೇ ದಕ್ಷರಾದರೂ, ನಿಷ್ಠಾವಂತರಾದರೂ ಭ್ರಷ್ಟಾಚಾರ ನಿಯಂತ್ರಿಸುವ ನಿಟ್ಟಿನಲ್ಲಿ ನಾವು ಏನನ್ನೂ ಕೂಡ ಹೆಚ್ಚಿನದ್ದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ದೇಶದ ಆಡಳಿತ ನಡೆಸಲು ಪ್ರಧಾನಿ ಅಸಮರ್ಥರಾಗಿದ್ದಾರೆ. ಅಣ್ಣಾ ಹಜಾರೆ ಅವರ ಪ್ರಾಮಾಣಿಕತೆ, ಬದ್ಧತೆ ಮತ್ತು ದಕ್ಷತೆಗಳನ್ನೇ ಪ್ರಶ್ನಿಸಿದ್ದಾರೆ ಎಂದು ಟೀಕಿಸಿದರು.

ಮಾಧ್ಯಮಗಳಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ರೀತಿಯಲ್ಲಿ ಅಸಹ್ಯವಾಗಿ ಮನಸೋ ಇಚ್ಛೆ ಮಾತನಾಡುತ್ತಿರುವ ಕಪಿಲ್‌ಸಿಬಲ್, ದಿಗ್ವಿಜಯ್ ಸಿಂಗ್‌ರಂಥಹ ವ್ಯಕ್ತಿಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಚ್ಯುತಿ ಉಂಟಾಗುತ್ತಿದೆ. ಪ್ರಧಾನಿಗಳು ಕೂಡಲೇ ಎಚ್ಚೆತ್ತುಕೊಂಡು ಇಂತಹ ವ್ಯಕ್ತಿಗಳನ್ನು ಅಧಿಕಾರದ ಗದ್ದುಗೆಯಿಂದ ಕೆಳಕ್ಕಿಳಿಸಬೇಕು. ರಾಜಕೀಯ ಸ್ವಾರ್ಥಕ್ಕಾಗಿ ದೇಶದ ಮರ್ಯಾದೆ, ಗೌರವ - ಘನತೆಗಳನ್ನು ಇರುವ ಹರಾಜು ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಹಿಂದು ಜಾಗರಣ ವೇದಿಕೆಯ ಅನಿಲ್ ನಾಯ್ಡು ಅವರು ಮಾತನಾಡಿ, ಪಿ. ಚಿದಂಬರಂ, ದಯಾನಿಧಿ ಮಾರನ್, ಹಸನ್ ಅಲಿ, ಸೋನಿಯಾ ಸೇರಿ ಹಗರಣಗಳ ಪಾಲುದಾರರನ್ನು ಜೈಲಿಗೆ ತಳ್ಳುವುದರ ಬದಲು ಪೊಲೀಸರು ಅಣ್ಣಾ ಹಜಾರೆ, ಬಾಬಾ ರಾಮದೇವರಂಥಹ ಹೋರಾಟಗಾರರ ಮೇಲೆ ಶಕ್ತಿ ಪ್ರದರ್ಶನ ಮಾಡುತ್ತಿದೆ. ಯುಪಿಎ ಸರ್ಕಾರಕ್ಕೆ ಕನಿಷ್ಠ ಪ್ರಮಾಣದ ಜವಾಬ್ದಾರಿ ಕೂಡ ಇಲ್ಲ ಎಂದು ಟೀಕಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+