ಉರುಳುಸೇವೆಯ ನಂತರ ದರ್ಗಾದಲ್ಲಿ ಪೂಜಾರಿ ಪ್ರಾರ್ಥನೆ
ಮಂಗಳೂರು, ಆ. 8 : ಅನಾರೋಗ್ಯದಲ್ಲಿದ್ದು ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ ಕೇಂದ್ರದ ಮಾಜಿ ಸಚಿವ ಬಿ. ಜನಾರ್ಧನ ಪೂಜಾರಿ ನೇತೃತ್ವದಲ್ಲಿ ಉಳ್ಳಾಲದ ಸೈಯ್ಯಿದ್ ಮದನಿ ದರ್ಗಾದಲ್ಲಿ ರವಿವಾರ ವಿಶೇಷ ಪ್ರಾರ್ಥನೆ ನಡೆಯಿತು.
ಕುದ್ರೋಳಿ ಗೋಕರ್ಣನಾಥ ದೇವಸ್ಥಾನದಲ್ಲಿ ಶನಿವಾರ ಉರುಳುಸೇವೆ ಮಾಡಿದ್ದ ಜನಾರ್ಧನ ಪೂಜಾರಿಯವರು ತಮ್ಮ ಬೆಂಬಲಿಗರೊಂದಿಗೆ ಭಾನುವಾರ ಉಳ್ಳಾಲ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹಿಂದೂ ದೇವಸ್ಥಾನದಲ್ಲಿ ಉರುಳುಸೇವೆಯ ನಂತರ ಮುಸ್ಲಿಂರ ದರ್ಗಾದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ನೆಕ್ಸ್ಟ್ ಚರ್ಚಾ? [ಪ್ರಾರ್ಥನೆಗೊಂದು ದಿನ ಬೇಕೆ?]
ಈ ಸಂದರ್ಭದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ ಅವರು, "ಪ್ರದಾನ ಮಂತ್ರಿ ಹುದ್ದೆಯನ್ನು ತ್ಯಜಿಸಿ ಜನರ ಸೇವೆಯನ್ನೇ ಮುಖ್ಯ ಧ್ಯೇಯವನ್ನಾಗಿಸಿರುವ ಸೋನಿಯಾ ಗಾಂಧಿಯವರಿಗೆ ಅಲ್ಪಸಂಖ್ಯಾಕರ ಮೇಲಿರುವ ಕಾಳಜಿ ಅಪಾರವಾಗಿದ್ದು. ವಿಶೇಷ ರಂಜಾನ್ ತಿಂಗಳಾಗಿರುವ ಈ ಸಂದರ್ಭದಲ್ಲಿ ಸಲ್ಲಿಸುವ ಪ್ರಾರ್ಥನೆ ದೇವರಿಗೆ ಪ್ರಿಯವಾಗುತ್ತದೆ" ಎಂದರು.
ದರ್ಗಾ ಸಮಿತಿ ಅಧ್ಯಕ್ಷ ಕಣಚೂರು ಮೋನು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎ.ಸಿ.ಭಂಡಾರಿ, ಕಾಂಗ್ರೆಸ್ ನಾಯಕರಾದ ಹರಿಕೃಷ್ಣ ಬಂಟ್ವಾಳ್, ಈಶ್ವರ ಉಳ್ಳಾಲ್ ಮತ್ತಿತರಿದ್ದರು.