ಬಾಣಂತಿಯರು ಸಾಯುತ್ತಿದ್ದರೂ ವೈದ್ಯರೇ ಇಲ್ಲ!

ಮೂರು ತಾಲೂಕುಗಳನ್ನು ಹೊಂದಿರುವ ಯಾದಗಿರಿ ಜಿಲ್ಲೆಯಲ್ಲಿ ಇತ್ತೀಚಿನ ಜನಗಣತಿ ಪ್ರಕಾರ ಜನಸಂಖ್ಯೆ 11.72 ಲಕ್ಷ. ಅದರಲ್ಲಿ 5.81 ಲಕ್ಷ ಮಹಿಳೆಯರಿದ್ದಾರೆ. ಇವರಿಗೆ ಚಿಕಿತ್ಸೆ ನೀಡಲು ಮಹಿಳಾ (ಸ್ತ್ರೀರೋಗ ತಜ್ಞೆ) ವೈದ್ಯರೇ ಇಲ್ಲ ಅಂದ್ರೆ ನಂಬ್ತೀರಾ? ಹೌದು ನೀವು ನಂಬಲೆಬೇಕು.
ಹೆರಿಗೆ ಸಂದರ್ಭದಲ್ಲಿ ಅತ್ಯವಶ್ಯಕವಾಗಿ ಬೇಕಾಗಿರುವ ಸ್ತ್ರೀರೋಗ ತಜ್ಞರೇ ಇಲ್ಲದಿರುವುದರಿಂದ ಜಿಲ್ಲೆಯಲ್ಲಿ ಶುಶ್ರೂಷಕಿಯರೇ ಹೆರಿಗೆ ಮಾಡಿಸುವ ತಜ್ಞರಾಗಬೇಕಾಗಿದೆ. ಇದರಿಂದಾಗಿ ಕೆಲವೊಮ್ಮೆ ಹೆರಿಗೆ ಸಮಯದಲ್ಲಿ ಉದ್ಬವಿಸುವ ತೊಂದರೆಗಳ ನಿರ್ವಹಣೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ದುರೂಗಳು ಬಂದಿವೆ.
ಗಂಭೀರ ಪರಿಸ್ಥಿತಿಯಿದ್ದರೆ ಗರ್ಭಿಣಿಯರನ್ನು ರಾಯಚೂರಿಗೋ ಅಥವಾ ಗುಲ್ಬರ್ಗ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಗರ್ಭಿಣಿಯರನ್ನು ಪರ ಊರಿಗೆ ಕಳುಹಿಸುವ ಸಂದರ್ಭದಲ್ಲಿ ಹಾದಿಯಲ್ಲಿ ಮರಣ ಹೊಂದಿದ ಘಟನೆಗಳೂ ಜರುಗಿವೆ. ಕಳೆದ ವರ್ಷ ಜಿಲ್ಲೆಯಲ್ಲಿ 1 ಲಕ್ಷ ಹೆರಿಗೆ ಪ್ರಕರಣಗಳಲ್ಲಿ 166 ತಾಯಂದಿರು ಮೃತಪಟ್ಟಿದ್ದಾರೆ. ಈ ವರ್ಷ ಮಾರ್ಚ್ ನಿಂದ ಜೂನ್ ವರೆಗೆ 10 ತಾಯಂದಿರು ಅಸುನೀಗಿದ್ದಾರೆ.
ಜಿಲ್ಲಾಸ್ಪತ್ರೆಯಲ್ಲಿ ಕರೆಂಟ್ ಹೋದಾಗಂತೂ ತಾಪತ್ರಯ ಹೇಳತೀರದು. ಬಾಣಂತಿ ಹಸುಗೂಸುಗಳಿಗೆ ಆತಂಕ ತಪ್ಪಿದ್ದಲ್ಲ. ಜನರೇಟರ್ ಇದ್ರೂ ಕತ್ತಲಲ್ಲಿ ಕೊಳಿಯುವಂತಾಗಿದೆ. ಬಡರೋಗಿಗಳ ಪಾಲಿಗೆ ಇದೊಂದು ನರಕದ ಅನುಭವ.
ವೈದ್ಯರ ಕೊರತೆ : ಜಿಲ್ಲೆಯಲ್ಲಿ ಕಾಯಂ ತಜ್ಞ ವೈದ್ಯರ ಒಟ್ಟು 40 ಹುದ್ದೆಗಳಿದ್ದರೂ, ಕೇವಲ 10 ವೈದ್ಯರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 30 ತಜ್ಞರ ಹುದ್ದೆಗಳು ಖಾಲಿಯಾಗಿಯೇ ಉಳಿದಿವೆ. ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ಪ್ರಯತ್ನಗಳು ಫಲ ನೀಡುತ್ತಿಲ್ಲ. ಗುತ್ತಿಗೆ ಆಧಾರದ ಮೇಲೆ ತಜ್ಞ ವೈದ್ಯರ ನೇಮಕಕ್ಕೆ ಹಲವಾರು ಬಾರಿ ಜಾಹೀರಾತು ನೀಡಿದೆ. ತಿಂಗಳಿಗೆ ರೂ 60 ಸಾವಿರ ವೇತನ ಕೋಡುವುದಾಗಿ ಹೇಳಿದರೂ, ಯಾವುದೇ ತಜ್ಞರು ಮುಂದೆ ಬರುತ್ತಿಲ್ಲ.
ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ, ತಾಲೂಕು ದಂಡಾಧಿಕಾರಿ, ಸಹಾಯಕ ಆಯುಕ್ತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಅಧ್ಯಕ್ಷೆ, ನಗರಸಭೆ ಅಧ್ಯಕ್ಷೆ ಮುಂತಾದ ಮಹಿಳಾಮಣಿಗಳೆಲ್ಲ ಅನೇಕ ಇಲಾಖೆಯಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರೂ ಮಹಿಳಾ ವೈದ್ಯರ ಕೊರತೆ ಎದುರಿಸುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಗರ್ಭಿಣಿಯರಿಗೆ ಆರೋಗ್ಯ ಸಲಹೆಗಳು
;












Click it and Unblock the Notifications