ಆ.5 ರಂದು ದೇಶವ್ಯಾಪಿ ಬ್ಯಾಂಕ್ ನೌಕರರ ಮುಷ್ಕರ
ಸುಮಾರು 10 ಲಕ್ಷ ನೌಕರರು ಮತ್ತು ಅಧಿಕಾರಿಗಳು ಮುಷ್ಕರ ನಡೆಸುವ ಸಾಧ್ಯತೆಯಿದೆ ಹಾಗಾಗಿ ಗ್ರಾಹಕರಿಗೆ ಪರದಾಟ ತಪ್ಪಿದ್ದಲ್ಲ. ಬೇಡಿಕೆಗಳಿಗೆ ಆಗ್ರಹಿಸಿ ಇಂಡಿಯನ್ ಬ್ಯಾಂಕ್ ಅಸೋಸಿಯೇಷನ್ಸ್ (IBA) ಜೊತೆ ಬ್ಯಾಂಕ್ ಯೂನಿಯನ್ ಗಳ ಒಕ್ಕೂಟ ನಡೆಸಿದ ಮಾತುಕತೆ ಮುರಿದು ಬಿದ್ದಿದೆ.
ಆ.3 ರಂದು ಇನ್ನೊಂದು ಸುತ್ತಿನ ಚರ್ಚೆ ನಡೆಯಲಿದ್ದು, ಅದರಲ್ಲಿ ಪವಾಡವೇನು ಸಂಭವಿಸುವ ಸಾಧ್ಯವಿಲ್ಲ. ನಾವು ಮುಷ್ಕರಕ್ಕೆ ಸಿದ್ಧತೆ ನಡೆಸಿದ್ದೇವೆ ಎಂದು ಬ್ಯಾಂಕ್ ಯೂನಿಯನ್ ಗಳ ಸಂಚಾಲಕ ಸಿಎಚ್ ವೆಂಕಟಾಚಲಮ್ ಹೇಳಿದ್ದಾರೆ.
ಸಮಸ್ಯೆ ಏನು?: ಸುಮಾರು 5 ಲಕ್ಷಕ್ಕೂ ಅಧಿಕ ಬ್ಯಾಂಕ್ ಉದ್ಯೋಗಿಗಳು ಮುಂದಿನ 5 ವರ್ಷಗಳಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ. ಈಗಾಗಲೇ 150,000 ಹುದ್ದೆಗಳು ಭರ್ತಿಯಾಗಿವೆ. ಬ್ಯಾಂಕ್ ನೇಮಕಾತಿ ಬೋರ್ಡ್ ಅನ್ನು ಪರಿಷ್ಕರಿಸಿ ಹೊಸ ನೇಮಕಾತಿಗೆ ಯೂನಿಯನ್ ಆಗ್ರಹಿಸುತ್ತಿದೆ.
ಇದಲ್ಲದೆ, ಬ್ಯಾಂಕ್ ಕೆಲಸಗಳನ್ನು ಹೊರಗುತ್ತಿಗೆ ನೀಡುವುದು, ಖಾಂಡೆಲ್ವಾಲ ಸಮಿತಿ ಶಿಫಾರಸ್ಸನ್ನು ವಜಾಗೊಳಿಸುವುದು, ಬ್ಯಾಂಕುಗಳಲ್ಲಿ ತನ್ನ ಪಾಲನ್ನು ಸರ್ಕಾರ ಕಡಿಮೆ ಮಾಡುವುದು ಮತ್ತು ವಿದೇಶಿ ಬ್ಯಾಂಕ್ ಹೂಡಿಕೆದಾರರಿಗೆ ಹೆಚ್ಚುವರಿ ಮತದಾನದ ಹಕ್ಕನ್ನು ನೀಡುವುದಕ್ಕೆ ಬ್ಯಾಂಕ್ ಯೂನಿಯನ್ ವಿರೋಧ ವ್ಯಕ್ತಪಡಿಸುತ್ತಿದೆ.