ಬಿಎಸ್ ಯಡಿಯೂರಪ್ಪ ಅವರ ಆಪ್ತ ಅಶೋಕ್ ಪದತ್ಯಾಗ
ರಾಜ್ಯಪಾಲರು ಅಶೋಕ್ ಅವರ ರಾಜೀನಾಮೆ ಅಂಗೀಕರಿಸಿದ್ದು, ಮುಂದಿನ ಅಡ್ವೊಕೇಟ್ ಜನರಲ್ರ ನೇಮಕವಾಗುವವರೆಗೆ ಹಂಗಾಮಿ ಅಡ್ವೊಕೇಟ್ ಜನರಲ್ ಆಗಿ ಮುಂದುವರಿಯಲಿದ್ದಾರೆ.
ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಆಪ್ತ ಒಕ್ಕೂಟದ ಮೊದಲ ವಿಕೆಟ್ ಉರುಳಿದೆ. ಯಡಿಯೂರಪ್ಪ ಅವರಿಗೆ ಸದಾ ಕಾನೂನು ಬೆಂಬಲ ನೀಡುತ್ತಿದ್ದ ಅಶೋಕ್ ಅವರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡ ಅವರು ಹಿಗ್ಗಾ ಮುಗ್ಗಾ ಬೈಯ್ದಿದ್ದರು.
ಹೊಸ ಸರ್ಕಾರದ ಜೊತೆಗೆ ಹೊಸ ಅಡ್ವೊಕೇಟ್ ಜನರಲ್ರನ್ನು ನೇಮಕಾತಿ ನಡೆಯುವುದು ಸಾಮಾನ್ಯ. ಆದರೆ, ಯಡಿಯೂರಪ್ಪ ಅವರ ಆಪ್ತರೇ ಸಿಎಂ ಪಟ್ಟ ಏರುವ ನಿರೀಕ್ಷೆ ಇರುವುದರಿಂದ ಅಶೋಕ್ ಮುಂದುವರೆಯುವ ಸಾಧ್ಯತೆಯಿತ್ತು.
ಆದರೆ, ಅಶೋಕ್ ಅವರು ಯಡಿಯೂರಪ್ಪ ಅವರ ಅಣತಿಯಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಯಡಿಯೂರಪ್ಪ ಬೆಂಬಲಿತ ಅನೇಕ ಅಧಿಕಾರಿಗಳು ಇದೇ ಹಾದಿಯಲ್ಲಿ ಮುಂದುವರೆಯುವ ಸೂಚನೆಗಳು ಸಿಕ್ಕಿವೆ.
ಮಾಜಿ ಕಾನೂನು ಸಚಿವ ಹಾರನಹಳ್ಳಿ ರಾಮಸ್ವಾಮಿ ಅವರ ಸುಪುತ್ರ ಅಶೋಕ್ ಹಾರನಹಳ್ಳಿ ಅವರು 2008ರ ಜೂ.22ರಂದು ಹಾರನಹಳ್ಳಿ ರಾಜ್ಯ ಅಡ್ವೊಕೇಟ್ರಾಗಿ ನೇಮಕಗೊಂಡಿದ್ದರು.