'ಆಪತ್ಬಾಂಧವ' ಗಡ್ಕರಿಗೆ ಫ್ಯಾಕ್ಸ್ ಮಾಡಿ, ಗೋಗರೆದ ಯಡ್ಡಿ

ಹಾಗೆಂದೂ ಯಾರೂ ಅವರನ್ನು ನಿಮ್ಮ ಕೊನೆಯಾಸೆ ಏನು ಎಂದು ಕೇಳಿಯೂ ಇಲ್ಲ. ಆದರೆ ಭಾನುವಾರ ಬೆಳಗ್ಗೆ ಜಯನಗರ ಟಿ ಬ್ಲಾಕ್ ನಲ್ಲಿರುವ ಲಕ್ಷ್ಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ, ರೇಸ್ ಕೋರ್ಸ್ ರಸ್ತೆಯಲ್ಲಿರುವ ಮನೆಗೆ ವಾಪಸಾದ ಯಜಮಾನ್ ಯಡಿಯೂರಪ್ಪ ಅವರು ಸ್ವಯಂಪ್ರೇರಣೆಯಿಂದ ಅಂತಿಮ ಅಸ್ತ್ರ ಝಳಪಿಸಿದ್ದಾರೆ.
ಆಪತ್ಬಾಂಧವ, ಪಕ್ಷದ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಗೆ ಬೆಳಗ್ಗೆ 7.30ರಲ್ಲಿ SOS ಸಂದೇಶ ಕಳಿಸಿರುವ ಯಡಿಯೂರಪ್ಪ, ಹೇಗಾದರೂ ಮಾಡಿ ಪಾರು ಮಾಡಿ ಎಂದು ಒತ್ತಡದ ತಂತ್ರ ಮುಂದುವರಿಸಿದ್ದಾರೆ.
ಫ್ಯಾಕ್ಸ್ ಮೂಲಕ ಹಾಡಿದ್ದನ್ನೇ ಹಾಡಿರುವ ಯಡಿಯೂರಪ್ಪ ...
ನೋಡಿ, ನಾನು ಪಕ್ಷದ ಶಿಸ್ತಿನ ಶಿಪಾಯಿಯಾಗಿ ಇಂದು ಮಧ್ಯಾಹ್ನ ರಾಜೀನಾಮೆ ಬಿಸಾಕುವುದಂತೂ ಖಂಡಿತ. ಆದರೂ ...ಒಮ್ಮೆ ನೀವು ಆ ಅಡ್ವಾಣಿಗೆ ಹೇಳಿ ನೋಡಿ. ನಾನೇನೂ ತಪ್ಪು ಮಾಡಿಲ್ಲ. ಏನೇ ಇದ್ದರೂ ನ್ಯಾಯಾಲಯದಲ್ಲಿ ಹೋರಾಡುವೆ. ಅದಕ್ಕೆ ಇಷ್ಟು ದೊಡ್ಡ ಶಿಕ್ಷೆ ಏಕೆ? 65 ಶಾಸಕರು, 14 ಸಂಸದರು, 20 ಮೇಲ್ಮನೆ ಸದಸ್ಯರು ನನ್ನೊಂದಿಗೇ ಇದ್ದಾರೆ. ಅಂಥಾದ್ದರಲ್ಲಿ ಇದೆಲ್ಲ ಏಕೆ? ಮತ್ತೊಮ್ಮೆ ಯೋಚಿಸಿ ನೋಡಿ.
ನಿಮ್ಮ ಕೈಯಲ್ಲಿ ಇಷ್ಟೂ ಆಗೋದಿಲ್ವಾ. ಆಯ್ತು ನೀವು ಹೇಳಿದಂತೆ ರಾಜೀನಾಮೆ ನಿಡುತ್ತೇನೆ. ಆದರೆ ನಮ್ಮ ಶೋಭಾ ಕರಂದ್ಲಾಜೇನೋ ಅಥವಾ ಶೆಟ್ಟರ್ ಅವರನ್ನೊ ನನ್ನ ಸ್ಥಾನಕ್ಕೆ ತನ್ನಿ. ನನಗೆ ಮಾತ್ರ ರಾಜ್ಯಾಧ್ಯಕ್ಷ ಸ್ಥಾನ ನೀಡಿ. ಕೊನೆಯದಾಗಿ, ಇದುವರೆಗೆ ನನ್ನ ಮೇಲೆ ವಿಶ್ವಾಸ ತೋರಿದ ವರಿಷ್ಠರಿಗೆ ಇದೋ ನನ್ನ ಕೋಟಿ ನಮನಗಳು... ಎಂದು ಯಡಿಯೂರಪ್ಪ ಹಾಡಿದ್ದನ್ನೇ ಹಾಡಿದ್ದಾರೆ.
ಯಡಿಯೂರಪ್ಪ ಅವರದು ಇದೇ ಕೊನೆಯ ಪ್ರಯತ್ನವೋ, ಅಥವಾ ಇನ್ನೂ ಯಾವ್ಯಾವ ಅಸ್ತ್ರಗಳನ್ನು ತೆಗೆಯುತ್ತಾರೋ... ಅಂತೂ ಕರ್ನಾಟಕದ ಜನತೆ ಕುತೂಹಲದಿಂದ ನೋಡುವಂತಾಗಿದೆ.












Click it and Unblock the Notifications